ADVERTISEMENT

ದಿನದ ಸೂಕ್ತಿ: ಮಾತು ಎಂಬ ಬೆಳಕು

ಎಸ್.ಸೂರ್ಯಪ್ರಕಾಶ ಪಂಡಿತ್
Published 1 ಜೂನ್ 2021, 0:58 IST
Last Updated 1 ಜೂನ್ 2021, 0:58 IST
ಸರಸ್ವತಿ
ಸರಸ್ವತಿ   

ಇಹ ಶಿಷ್ಟಾನುಶಿಷ್ಟಾನಾಂ ಶಿಷ್ಟಾನಾಮಪಿ ಸರ್ವಥಾ |
ವಾಚಾಮೇವ ಪ್ರಸಾದೇನ ಲೋಕಯಾತ್ರಾ ಪ್ರವರ್ತತೇ ||

ಇದಮಂಧಂ ತಮಃ ಕೃತ್ಸ್ನಂ ಜಾಯೇತ ಭುವನತ್ರಯಂ |
ಯದಿ ಶಬ್ದಾಹ್ವಯಂ ಜ್ಯೋತಿರಾಸಂಸಾರಾನ್ನ ದೀಪ್ಯತೇ ||

ಇದರ ತಾತ್ಪರ್ಯ ಹೀಗೆ:

ADVERTISEMENT

‘ಭಾಷೆಗಳು ವಿದ್ವಾಂಸರ ಅನುಶಾಸನಕ್ಕೆ ಒಳಪಟ್ಟವಾಗಿರಬಹುದು, ಬಿಟ್ಟವಾಗಿರಬಹುದು; ಎಲ್ಲ ರೀತಿಯಲ್ಲೂ ಅವುಗಳ ಅನುಗ್ರಹ ಮಾತ್ರದಿಂದಲೇ ಲೋಕವ್ಯವಹಾರ ಸಾಗುತ್ತಿದೆ. ಮಾತಿನ ಜ್ಯೋತಿ ಸಂಸಾರದ ಉದ್ದಕ್ಕೂ ಬೆಳಗದೆ ಇದ್ದರೆ ಅಶೇಷ ಭುವನತ್ರಯವೂ ಕಗ್ಗತ್ತಲಾಗಿ ಬಿಟ್ಟೀತು.‘

‘ಕಾವ್ಯಾದರ್ಶ‘ದ ಈ ಶ್ಲೋಕಗಳ ಈ ಅನುವಾದವನ್ನು ಮಾಡಿರುವವರು ತೀನಂಶ್ರೀ ಅವರು.

ಮಾತಿನ ಶಕ್ತಿಯನ್ನು ಈ ಶ್ಲೋಕ ನಿರೂಪಿಸುತ್ತಿದೆ.

ಮಾತಿಲ್ಲದ ನಮ್ಮ ಜೀವನವನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಾಗದು. ನಮ್ಮ ಆಚಾರ, ವಿಚಾರ, ನೋವು, ನಲಿವು, ಸೋಲು, ಗೆಲವು, ವಿದ್ಯೆ, ಅವಿದ್ಯೆ – ಎಲ್ಲವೂ ಮಾತನ್ನು ಆಶ್ರಯಿಸಿಯೇ ನಡೆಯುತ್ತಿರುತ್ತದೆ.

ಮಾನವನ ವಿಕಾಸದಲ್ಲಿ ಮಾತಿನ ಪಾತ್ರ ತುಂಬ ದೊಡ್ಡದು. ಅವನು ಇಂದು ಏನೆಲ್ಲ ಸಾಧನೆಯನ್ನು ಮಾಡಿದ್ದಾನೆ, ಅದಕ್ಕೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಮಾತು ಕಾರಣವಾಗಿರುತ್ತದೆ. ಹೇಗೆ ನಾವು ಕತ್ತಲೆಯಲ್ಲಿ ನಡೆಯುವುದಕ್ಕೆ ಸಾಧ್ಯವಾಗುವುದಿಲ್ಲವೋ ಹಾಗೆಯೇ ಮಾತಿಲ್ಲದೆ ನಮ್ಮ ಜೀವನ ಮುಂದೆ ಸಾಗದು. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು ಮಾತು ಎಂಬುದು ಜ್ಯೋತಿ ಇದ್ದಂತೆ, ಎಂದರೆ ಮಾತು ಎಂಬುದು ಬೆಳಕು; ನಮ್ಮ ಜೀವನದ ದಾರಿಯನ್ನು ತೋರುವ, ಕತ್ತಲೆಯನ್ನು ಹೋಗಲಾಡಿಸುವ ಬೆಳಕು. ಈ ಬೆಳಕು ಇಲ್ಲದಿದ್ದರೆ ಮೂರು ಲೋಕಗಳೂ ಕತ್ತಲೆಯಲ್ಲಿ ಮುಳುಗಿಬಿಡುತ್ತವೆ.

ಇಂಥ ಮಾತನ್ನು ನಾವು ಬಳಸುವ ಮುನ್ನ ತುಂಬ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮಾತಿನಿಂದ ನಮ್ಮ ಜೀವನವನ್ನು ಕಟ್ಟಿಕೊಳ್ಳಲೂಬಹುದು, ಕೆಡವಿಕೊಳ್ಳಲೂಬಹುದು. ಮಾತನ್ನು ನಮ್ಮ ಸಂಸ್ಕೃತಿಯಲ್ಲಿ ದೇವತೆ ಎಂದೇ ಆದರಿಸಲಾಗಿದೆ; ಮಾತಿನ ಒಡತಿಯಾಗಿ ಸರಸ್ವತಿ ಕಾಣಿಸಿಕೊಂಡಿದ್ದಾಳೆ. ಮಾತು ಶಕ್ತಿ, ಬೆಳಕು, ಧ್ಯಾನ, ಸಂಪತ್ತು, ಸೌಂದರ್ಯ, ಭಾವ, ಬದುಕು, ಸಂತೋಷ, ದುಃಖ, ತಂದೆ, ತಾಯಿ, ಬಂಧು, ಬಳಗ – ಎಲ್ಲವೂ ಆಗಿದೆ ಎಂಬುದನ್ನು ನಾವು ಮರೆಯಬಾರದು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.