ಎಐ ಚಿತ್ರ
ಕಾರ್ತಿಕ ಮಾಸದ ಆರಂಭದೊಂದಿಗೆ ದೀಪಾವಳಿಯು ಆರಂಭವಾಗುತ್ತದೆ. ಕಾರ್ತಿಕ ಮಾಸವನ್ನು ದೀಪಾರಾಧನೆಯ ಮಾಸವೆಂದು ಕರೆಯಲಾಗುತ್ತದೆ. ದೀಪಾವಳಿ ಕೇವಲ ದೀಪಗಳ ಹಬ್ಬವಾಗದೇ ವಿಜಯದ ಸಮೃದ್ಧಿ ಮತ್ತು ಹೊಸ ಆರಂಭದ ಸಂಕೇತ ಎಂದು ಜ್ಯೋತಿಷ ಹೇಳುತ್ತದೆ.
ಶ್ರೀರಾಮಚಂದ್ರನು ರಾವಣನನ್ನು ಸಂಹರಿಸಿ 14 ವರ್ಷಗಳ ವನವಾಸದ ನಂತರ ಅಯೋಧ್ಯೆಗೆ ಹಿಂದಿರುಗಿ ಬರುತ್ತಾನೆ. ಆಗ ಅಯೋಧ್ಯೆಯ ಜನರು ದೀಪಗಳನ್ನು ಬೆಳಗಿಸಿ ಪಟಾಕಿ ಸಿಡಿಸಿ ಸಂಭ್ರಮದಿಂದ ರಾಮನನ್ನು ಬರಮಾಡಿಕೊಳ್ಳುತ್ತಾರೆ. ಈ ದಿನವನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ ಎಂದು ಪುರಾಣ ಕಥೆಗಳು ಹೇಳುತ್ತವೆ.
ಈ ದಿನವನ್ನು ಅಜ್ಞಾನದ ಮೇಲೆ ಜ್ಞಾನದ ವಿಜಯ, ದುಷ್ಟತನದ ಮೇಲೆ ಸಜ್ಜನಿಕೆಯ ವಿಜಯ ಸಾಧಿಸಿದ ದಿನ ಎಂದು ಕರೆಯಲಾಗುತ್ತದೆ.
ಶ್ರೀಕೃಷ್ಣನು ಸತ್ಯಭಾಮೆಯ ಜೊತೆಗೂಡಿ ನರಕಾಸುರನನ್ನು ಸಂಹಾರ ಮಾಡಿ ಲೋಕಕ್ಕೆ ನೆಮ್ಮದಿ ನೀಡಿದ ದಿನವನ್ನು ದೀಪಾವಳಿಯ ಭಾಗವಾಗಿ ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ. ಈ ದಿನ ಬೆಳಿಗ್ಗೆ ಎಣ್ಣೆ ಸ್ನಾನ ಮಾಡಿ ದೀಪ ಬೆಳಗಿಸುವ ಮೂಲಕ ಕೆಟ್ಟ ಶಕ್ತಿಗಳಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇದೆ.
ದೀಪಾವಳಿಯ ಮಾರನೆಯ ದಿನ ಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ. ಈ ದಿನ ಲಕ್ಷ್ಮೀದೇವಿ ಹಾಗೂ ಗಣೇಶನನ್ನು ಪೂಜಿಸಲಾಗುತ್ತದೆ. ಮನೆಯನ್ನು ದೀಪಗಳಿಂದ ಅಲಂಕರಿಸಿ ವಿವಿಧ ಸಿಹಿ ತಿಂಡಿಗಳನ್ನು ತಯಾರಿಸಿ ಹಂಚಲಾಗುತ್ತದೆ. ಮಕ್ಕಳು ಪಟಾಕಿ ಸಿಡಿಸಿ ಸಂತೋಷ ಪಡುತ್ತಾರೆ.
ನಾಲ್ಕನೇ ದಿನವನ್ನು ಕೆಲವೆಡೆ ಗೋವರ್ಧನನ್ನು ಪೂಜಿಸುತ್ತಾರೆ. ಇದನ್ನು ಕರ್ನಾಟಕದಲ್ಲಿ ಬಲಿಪಾಡ್ಯಮಿ ಎಂದು ಆಚರಿಸುತ್ತಾರೆ. ಶ್ರೀಕೃಷ್ಣ ಗೋವರ್ಧನ ಪರ್ವತವನ್ನು ಎತ್ತಿ ಗೋಪಾಲಕರನ್ನು ರಕ್ಷಿಸಿದ ದಿನ ಎಂತಲೂ ಕರೆಯಲಾಗುತ್ತದೆ. ಬಲಿಪಾಡ್ಯಮಿ ದಿನದಂದು ಬಲಿ ಚಕ್ರವರ್ತಿಯನ್ನು ಪೂಜಿಸಲಾಗುತ್ತದೆ.
ಕೊನೆಯ ದಿನ ಸಹೋದರರ ಹಬ್ಬವನ್ನು ಆಚರಿಸಲಾಗುತ್ತದೆ. ಸಹೋದರಿಯರು ತಮ್ಮ ಸಹೋದರರ ಯೋಗ ಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸಿ, ಆರತಿ ಮಾಡಿ ತಿಲಕವಿಟ್ಟು ಸಿಹಿ ಹಂಚುತ್ತಾರೆ. ದೀಪಾವಳಿಯು ಕೇವಲ ಭವ್ಯ ಆಚರಣೆಗೆ ಸೀಮಿತವಲ್ಲ, ಬದಲಾಗಿ ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ ಎಂದು ಹೇಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.