ಚಿತ್ರ:ಎಐ
ಹನುಮಂತನಿಗೆ ವಾಯುಪುತ್ರ, ಕಪಿವೀರ, ರಾಮ ಭಕ್ತ ಮಾರುತಿ, ಕೇಸರಿ ಪುತ್ರ ಹಾಗೂ ವಾನರ ಶ್ರೇಷ್ಠ ಎಂಬ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ಆಂಜನೇಯನನ್ನು ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರೂ ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಆಂಜನೇಯನ ದೇವಸ್ಥಾನವಿಲ್ಲದ ಊರಿಲ್ಲ ಎಂಬ ಮಾತಿದೆ. ಆಂಜನೇಯ ಭಕ್ತಿ ಮತ್ತು ಶಕ್ತಿಯ ಸ್ವರೂಪವೆಂದು ಹೇಳಲಾಗುತ್ತದೆ. ಸಂಕಟ ವಿಮೋಚಕ ಎಂತಲೂ ಕರೆಯಲಾಗುತ್ತದೆ.
ಹನುಮಂತನ ಜನ್ಮ ಸ್ಥಳ ಕರ್ನಾಟಕದ ಅಂಜನಾದ್ರಿ ಬೆಟ್ಟವಾಗಿದೆ. ಈತನ ತಾಯಿ ಅಂಜನಾದೇವಿ. ಪುರಾಣ ಕಥೆಗಳ ಪ್ರಕಾರ ಅಂಜನಾದೇವಿ ದೇವಲೋಕದ ಪೂಂಜಕಸ್ಥಳಿ ಎಂಬ ಅಪ್ಸರೆಯಾಗಿರುತ್ತಾಳೆ. ಇಂದ್ರನ ಆಸ್ಥಾನದಲ್ಲಿದ್ದ ಮಹಾಸುಂದರಿಯಾಗಿರುತ್ತಾಳೆ.
ಒಮ್ಮೆ ಇಂದ್ರಲೋಕಕ್ಕೆ ಬಂದಿದ್ದ ಹಂಗೀರ ಎಂಬ ಋಷಿಯನ್ನು ಈಕೆ ಅವಮಾನಿಸುತ್ತಾಳೆ. ಇದರಿಂದ ಕೋಪಕೊಂಡ ಹಂಗಿರ ಋಷಿಯು ನೀನು ಮುಂದಿನ ಜನ್ಮದಲ್ಲಿ ಹೆಣ್ಣು ಮಂಗವಾಗಿ ಜನಿಸು ಎಂದು ಶಪಿಸುತ್ತಾರೆ.
ಆಗ ಈಕೆ ಭಯಗೊಂಡು ಋಷಿಯಲ್ಲಿ ಕ್ಷಮೆ ಕೋರಿ ಪ್ರಾರ್ಥಿಸಿದಾಗ, ಋಷಿಯು ನಿನಗೆ ದೈವಾಂಶ ಸಂಭೂತನಾದ ಪರಮಾತ್ಮನಿಗೆ ಪ್ರಿಯ ಹಾಗೂ ಮಹಾ ಶಕ್ತಿಶಾಲಿಯು ಆದ ಪುತ್ರನ ಜನನವಾಗುತ್ತದೆ ಎಂಬ ವರ ನೀಡುತ್ತಾರೆ.
ಅದರಂತೆ ಕುಂಜರ ಎಂಬ ಕಪಿಗೆ ಪುತ್ರಿಯಾಗಿ ಜನಿಸುತ್ತಾಳೆ. ಈಕೆಗೆ ಅಂಜನಾದೇವಿ ಎಂದು ನಾಮಕರಣ ಮಾಡಲಾಗುತ್ತದೆ. ಈಕೆಯ ವಿವಾಹ ಕಪಿ ರಾಜನಾದ ಕೇಸರಿಯೊಂದಿಗೆ ಆಗುತ್ತದೆ. ಹಲವು ವರ್ಷಗಳ ಕಾಲ ಅವರಿಗೆ ಮಕ್ಕಳಾಗುವುದಿಲ್ಲ. ಆಗ ಅಂಜನಾದೇವಿಯು ಶಿವನನ್ನು ಕುರಿತು ತಪಸ್ಸು ಮಾಡುತ್ತಾಳೆ. ಶಿವನು ಆಕೆಯ ತಪಸ್ಸಿಗೆ ಮೆಚ್ಚಿತ ತನ್ನ ಅಂಶವನ್ನು ಅಂಜನಾದೇವಿಯ ಗರ್ಭದಲ್ಲಿ ಸೇರಿಸಲು ವಾಯು ದೇವರಿಗೆ ಸೂಚಿಸುತ್ತಾರೆ.
ವಾಯುದೇವ ಅಂಜನಾದೇವಿಯ ಕರ್ಣದಲ್ಲಿ ಪ್ರವೇಶಿಸಿ ಶಿವನ ಅಂಶವನ್ನು ಅಂಜನಾದೇವಿಯ ಗರ್ಭದಲ್ಲಿ ಸ್ಥಾಪಿಸುತ್ತಾರೆ. ಇದರ ಪರಿಣಾಮವಾಗಿ ಅಂಜನಾದೇವಿಯು ಗರ್ಭಗವತಿಯಾಗಿ ಹನುಮ ಜನಿಸುತ್ತಾನೆ.
ಆಂಜನೇಯನನ್ನು ಶುದ್ಧ ಮನಸ್ಸಿನಿಂದ ಪ್ರಾರ್ಥಿಸಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮುಗಿಸಿ ಆಂಜನೇಯನ ಭಾವಚಿತ್ರ ಅಥವಾ ವಿಗ್ರಹವನ್ನು ಪ್ರತಿಷ್ಠಾಪಿಸಿ. ಪಂಚಾಮೃತದಿಂದ ಅಭಿಷೇಕ ಮಾಡಿ ನಂತರ ಕೆಂಪು ಬರ್ಣದ ಹೂ ಸಮರ್ಪಿಸಿ. ವಿಳ್ಯೆದೆಲೆಯ ಹಾರ ಹಾಕಿ, ಬಾಳೆಹಣ್ಣನನ್ನು ನೈವೇದ್ಯಕ್ಕೆ ಇಡಬೇಕು. ಹೀಗೆ ಪೂಜಿಸಿದರೆ ಆಂಜನೇಯನ ಅನುಗ್ರಹ ದೊರೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.