
ಡಿಸೆಂಬರ್ 11ರ ಸಂಜೆ 6.30ಕ್ಕೆ ಆರಂಭವಾಗಿ 12ರ ಸಂಜೆ 6.35ಕ್ಕೆ ಮುಕ್ತಾಯಗೊಳ್ಳಲಿರುವ ಅಷ್ಟಮಿ ತಿಥಿಗೆ ಮೊದಲು ಕಾಲಭೈರವಾಷ್ಟಮಿಯನ್ನು ಆಚರಿಸಲಾಗುತ್ತದೆ. ಇದರ ಆಚರಣೆಯಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನದ ಮಹತ್ವವೇನು ಎಂಬುದನ್ನು ತಿಳಿಯೋಣ.
ಕಾಲಭೈರವನನ್ನು ಪೂಜಿಸುವ ಭಕ್ತರು ಬೆಳಿಗ್ಗೆ ಬೇಗನೆ ಎದ್ದು ತಲೆಗೆ ಸ್ವಲ್ಪವಾದರೂ ಎಳ್ಳೆಣ್ಣೆಯನ್ನು ಹಚ್ಚಿ ಸ್ನಾನ ಮಾಡಬೇಕು. ಬಳಿಕ ನೀಲಿ ಅಥವಾ ಕಪ್ಪು ವಸ್ತ್ರವನ್ನು ಧರಿಸಿ. ಕಾಲಭೈರವನ (ಈಶ್ವರ) ದೇವಸ್ಥಾನಕ್ಕೆ ಭೇಟಿ ನೀಡಿ ಶ್ರದ್ಧೆ ಮತ್ತು ಭಕ್ತಿಯಿಂದ ಪೂಜೆ ಸಲ್ಲಿಸಿ.
ಪೂಜಾ ಸಮಯದಲ್ಲಿ ಬೇವಿನ ಹಣ್ಣಿನಿಂದ ಕಾಲಭೈರವನಿಗೆ ನೈವೇದ್ಯ ಮಾಡಿ. ಪೂಜೆಯಲ್ಲಿ ಕುಂಬಳಕಾಯಿಯ ದೀಪ ಹಚ್ಚುವುದು ಶ್ರೇಷ್ಠವೆಂಬ ನಂಬಿಕೆ ಇದೆ.
ಕಾಲಭೈರವನಿಗೆ ಪೂಜೆ ಸಲ್ಲಿಸಿದ ನಂತರ ಶ್ವಾನಗಳಿಗೆ ಆಹಾರವನ್ನು ನೀಡಿದರೆ, ಕಾಲಭೈರವನ ಕೃಪಾಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಈ ಪೂಜೆಯಿಂದ ಮಾಟ ಮಂತ್ರ ಜಾತಕ ದೋಷ ಪರಿಹಾರವಾಗುತ್ತದೆ. ಆದರೆ ಗೃಹಸ್ಥಾಶ್ರಮದಲ್ಲಿರುವವರು ಕಾಲಭೈರವನ ವಿಗ್ರಹ ಅಥವಾ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜಿಸಬಾರದು ಎಂದು ಹೇಳಲಾಗುತ್ತದೆ.
ಕಾಲಭೈರವನನ್ನು ನಿಷ್ಠೆ, ಶ್ರದ್ಧೆಯಿಂದ ಪೂಜಿಸುವುದರಿಂದ ಸಂಸಾರಿಕ ಜೀವನ ಸುಗಮವಾಗುತ್ತದೆ ಎಂದು ಸ್ಕಂದ ಪುರಾಣ, ಶಿವ ಪುರಾಣ ಹಾಗೂ ದೇವಿ ಪುರಾಣದಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.