
ಎಐ ಚಿತ್ರ
ಕಾರ್ತಿಕ ಮಾಸದಲ್ಲಿ ತುಳಸಿ ಹಬ್ಬದ ನಂತರ ಕಾರ್ತಿಕ ಹುಣ್ಣಿಮೆ ಬರುತ್ತದೆ. ಕಾರ್ತಿಕ ಹುಣ್ಣಿಮೆಯು ಕಾರ್ತಿಕ ಮಾಸ ಆರಂಭವಾದ 15ನೇ ದಿನಕ್ಕೆ ಬರುತ್ತದೆ. ಈ ದಿನ ಚಂದ್ರನು ವರ್ಷದ 12 ಹುಣ್ಣಿಮೆಗಳಿಗಿಂತ ಹೆಚ್ಚು ಪ್ರಕಾಶಮಾನವಾಗಿ ಗೋಚರಿಸುತ್ತಾನೆ.
ಇದೇ ನವೆಂಬರ್ 5ರಂದು ಕಾರ್ತಿಕ ಹುಣ್ಣಿಮೆ ಬಂದಿದೆ. ಇದಕ್ಕೆ ‘ಚಂದ್ರ ಜಯಂತಿ’ ಎಂದೂ ಕರೆಯಲಾಗುತ್ತದೆ. ಹಾಗಾದರೆ ಈ ಕಾರ್ತಿಕ ಹುಣ್ಣಿಮೆಯ ಮಹತ್ವ ಏನು? ಪೌರಾಣಿಕ ಹಿನ್ನೆಲೆ ಏನೆಂಬುದನ್ನು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ತಿಳಿಸಿದ್ದಾರೆ.
ಪೌರಾಣಿಕ ಹಿನ್ನೆಲೆ:
ತ್ರಿಪುರ ಎಂಬ ರಾಕ್ಷಸನನ್ನು ಶಿವನು ಸಂಹಾರ ಮಾಡುತ್ತಾನೆ. ಆಗ ದೇವತೆಗಳು ದೀಪ ಬೆಳಗಿಸಿ ಸಂಭ್ರಮಿಸುತ್ತಾರೆ. ಆ ಕಾರಣಕ್ಕಾಗಿ ಕಾರ್ತಿಕ ಹುಣ್ಣಿಮೆಗೆ ‘ದೇವ ದೀಪಾವಳಿ’, ‘ತ್ರಿಪೂರಿ ಹುಣ್ಣಿಮೆ’ ಎಂಬ ಹೆಸರು ಕೂಡ ಬಂದಿದೆ.
ಈ ದಿನದ ಆಚರಣೆ ಏನು?
ಹಿಂದೂ ಸಂಪ್ರದಾಯದ ಪ್ರಕಾರ ಈ ದಿನ ದೇವಾಲಯಗಳಲ್ಲಿ ದೀಪಗಳನ್ನು ಹಚ್ಚಲಾಗುತ್ತದೆ. ಕೆಲವು ದೇವಾಲಯಗಳಲ್ಲಿ ದೀಪೋತ್ಸವವನ್ನು ಆಚರಿಸಲಾಗುತ್ತದೆ.
ಈ ದಿನ ನದಿಯಲ್ಲಿ ಸ್ನಾನ ಮಾಡುವುದರಿಂದ ಜಾತಕ ದೋಷಗಳು ನಿವಾರಣೆಯಾಗುವುದರೊಂದಿಗೆ ದೇವತೆಗಳ ಆಶೀರ್ವಾದ ದೊರೆಯಲಿದೆ ಎಂಬ ನಂಬಿಕೆ ಇದೆ. ಸೂರ್ಯೋದಯಕ್ಕೆ ಮುನ್ನ ನದಿ ಸ್ನಾನ ಮಾಡಬೇಕು. ಇದನ್ನು ‘ಕಾರ್ತಿಕ ಸ್ನಾನ’ ಎಂದು ಕರೆಯಲಾಗುತ್ತದೆ.
ಈ ದಿನ ಶಿವನಿಗೆ ಪಂಚಾಮೃತಗಳಿಂದ ಅಭಿಷೇಕ ಮಾಡುವುದರಿಂದ ಬಡತನ ನಿವಾರಣೆಯಾಗಿ ಆರ್ಥಿಕ ಲಾಭ ದೊರೆಯುತ್ತದೆ ಎಂಬ ನಂಬಿಕೆ ಇದೆ.
ವಿಷ್ಣು ಪುರಾಣದ ಪ್ರಕಾರ ಕಾರ್ತಿಕ ಹುಣ್ಣಿಮೆಯಂದು ನಾರಾಯಣನು ಮತ್ಸವಾತಾರ ಧರಿಸಿದನು ಎಂದು ಹೇಳಲಾಗುತ್ತದೆ. ಆದ್ದರಿಂದ ಈ ದಿನ ವಿಷ್ಣುವಿನ ಆರಾಧನೆ ಮಾಡುವುದು ಶ್ರೇಷ್ಠ ಎಂದು ಜ್ಯೋತಿಷ ಹೇಳುತ್ತದೆ.
ಈ ದಿನ ವಿಷ್ಣು ಹಾಗೂ ಲಕ್ಷ್ಮೀ ದೇವಿಯನ್ನು ಆರಾಧಿಸುವುದರಿಂದ ಆರ್ಥಿಕ ಸಂಕಷ್ಟ ದೂರವಾಗುತ್ತವೆ ಎಂಬ ನಂಬಿಕೆ ಇದೆ.
ತುಳಸಿ ಕಾರ್ತಿಕ ದ್ವಾದಶಿಯಂದು ವಿಷ್ಣುವಿನ ಜೊತೆ ವಿವಾಹವಾಗಿ ಕಾರ್ತಿಕ ಮಾಸದ ಹುಣ್ಣಿಮೆಯಂದು ವೈಕುಂಠಕ್ಕೆ ತೆರಳಿದಳು ಎಂಬ ನಂಬಿಕೆ ಕೂಡ ಇದೆ. ಆದ್ದರಿಂದ ಕಾರ್ತಿಕ ಮಾಸದ ಹುಣ್ಣಿಮೆಯಂದು ತುಳಸಿ ಪೂಜೆ ಮಾಡುವುದು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ ಎಂದು ಜ್ಯೋತಿಷಿ ಎಲ್ ವಿವೇಕಾನಂದ ಆಚಾರ್ಯ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.