ಸನ್ಮಿತ್ರಂ ಸಧನಂ ಸ್ವಯೋಷಿತಿ ರತಿಶ್ಚಾಜ್ಞಾಪರಾಃ ಸೇವಕಾಃ
ಸಾನಂದಂ ಸದನಂ ಸುತಾಶ್ಚ ಸುಧಿಯಃ ಕಾಂತಾ ಮನೋಹಾರಿಣೀ |
ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮಿಷ್ಟಾನ್ನಪಾನಂ ಗೃಹೇ
ಸಾಧೋಃ ಸಂಗಮುಪಾಸತೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮಃ ||
ಆದರ್ಶ ಕುಟುಂಬದ ಚಿತ್ರಣವನ್ನು ಕವಿ ಈ ಪದ್ಯದಲ್ಲಿ ಕಾಣಿಸಿದ್ದಾನೆ; ಗೃಹಸ್ಥನಾಗಿರುವುದೇ ಧನ್ಯ ಎಂದೂ ಸಾರಿದ್ದಾನೆ. ಏಕೆಂದರೆ:
‘ಗೃಹಸ್ಥನಿಗೆ ಒಳ್ಳೆಯ ಸ್ನೇಹಿತರಿರುತ್ತಾರೆ; ಅವರೇ ನಿಜವಾದ ಸಂಪತ್ತು. ಆಜ್ಞೆಯನ್ನು ಪಾಲಿಸುವ ಸೇವಕರು ಇರುತ್ತಾರೆ. ಮನೆಯೇ ಆನಂದದ ನೆಲೆಯಾಗಿರುತ್ತದೆ. ಮಕ್ಕಳೂ ಬುದ್ಧಿವಂತರು. ಹೆಂಡತಿ ಸುಂದರಿ ಮತ್ತು ಸರಸಿ. ಮನೆಯಲ್ಲಿ ದಿನವೂ ದೇವರ ಪೂಜೆ–ವ್ರತಗಳು, ಜೊತೆಯಲ್ಲಿ ಹಲವು ವಿಧದ ಅಡುಗೆಯ ಸವಿ. ಅತಿಥಿ ಸತ್ಕಾರಕ್ಕೂ ಯಥೇಷ್ಟ ಅವಕಾಶ. ಒಳ್ಳೆಯವರ ಸ್ನೇಹಕ್ಕೂ ಕುಟುಂಬವೇ ಕಾರಣವಾಗುತ್ತದೆ. ಹೀಗಾಗಿ ಜೀವನದಲ್ಲಿ ಸಂತೋಷಕ್ಕೆ ಬೇಕಾದ ಎಲ್ಲವೂ ಗೃಹಸ್ಥಾಶ್ರಮದಲ್ಲಿಯೇ ದೊರಕುವುದರಿಂದ ಗೃಹಸ್ಥಾಶ್ರಮವೇ ಧನ್ಯ.’
ಭಾರತೀಯ ಸಂಸ್ಕೃತಿಯಲ್ಲಿ ವಿರಕ್ತಿಗೇ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿದೆ – ಎನ್ನುವ ಆರೋಪವಿದೆ. ಆದರೆ ನಮ್ಮ ಎಲ್ಲ ಪ್ರಮುಖ ವಾಙ್ಮಯದಲ್ಲಿ ಕೌಟುಂಬಿಕ ಜೀವನವನ್ನೇ ಎತ್ತಿಹಿಡಿಯಲಾಗಿದೆ. ಮನುಷ್ಯನು ಧರ್ಮಬದ್ಧವಾಗಿ ಎಲ್ಲ ರೀತಿಯ ಸುಖಗಳನ್ನೂ ಅನುಭವಿಸಬಹುದು, ಅನುಭವಿಸತಕ್ಕದ್ದು ಎನ್ನುವುದು ನಮ್ಮ ಸಂಸ್ಕೃತಿಯ ಒಕ್ಕಣೆ. ಅಂಥದೊಂದು ಆದರ್ಶಮಯವೂ ಸಂತೋಷಮಯವೂ ಆದ ಕುಟುಂಬದ ವರ್ಣನೆಯನ್ನು ಈ ಪದ್ಯದಲ್ಲಿ ಕಾಣಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.