ADVERTISEMENT

ಅಣು ಸಂಶೋಧಾನಾ ಕೇಂದ್ರಕ್ಕೆ ಜಮೀನು ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 10:50 IST
Last Updated 25 ಜನವರಿ 2011, 10:50 IST

ಚಿತ್ರದುರ್ಗ: ಬಾಬಾ ಅಣು ಸಂಶೋಧನಾ ಕೇಂದ್ರಕ್ಕೆ ಚಳ್ಳಕೆರೆ ತಾಲ್ಲೂಕಿನ ಕುದಾಪುರದ 1,810 ಎಕರೆ ಜಮೀನನ್ನು ಸೋಮವಾರ ಅಣುಶಕ್ತಿ ಇಲಾಖೆ ಜಂಟಿ ನಿರ್ದೇಶಕ ಸಿ.ಡಿ.ಎಸ್. ವೆಂಕಟರತ್ನ ಅವರಿಗೆ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಹಸ್ತಾಂತರಿಸಿದರು.

ಚಳ್ಳಕೆರೆಯ ತಾಲ್ಲೂಕಿನ ಕುದಾಪುರದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಜಮೀನಿನ ದಾಖಲೆಗಳನ್ನು ಹಸ್ತಾಂತರಿಸಲಾಯಿತು. ಕೇಂದ್ರ ಸರ್ಕಾರದ ಅಣುಶಕ್ತಿ ಇಲಾಖೆಯ ಬಾಬಾ ಅಣು ಸಂಶೋಧನಾ ಕೇಂದ್ರದ ವಿಶೇಷ ಅಭಿವೃದ್ಧಿ ಸೌಲಭ್ಯ ಕೇಂದ್ರ ಸ್ಥಾಪಿಸಲು ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಹೋಬಳಿ ಕುದಾಪುರದಲ್ಲಿ ರಿ.ಸ. 47ರಲ್ಲಿ 400 ಎಕರೆ ಜಮೀನು ಹಾಗೂ ತಳಕು ಹೋಬಳಿ ಉಳ್ಳಾರ್ತಿ ಕಾವಲ್‌ನಲ್ಲಿ ರಿ.ಸ. 1ರಲ್ಲಿ 1,410 ಎಕರೆ ಜಮೀನು ಸೇರಿ ಒಟ್ಟು 1,810 ಎಕರೆ  ಜಮೀನನ್ನು ಬಾಬಾ ಅಣು ಸಂಶೋಧನಾ ಕೇಂದ್ರಕ್ಕೆ ನೀಡಲು ಕಳೆದ 2010ರ ಡಿಸೆಂಬರ್ 10ರಂದು ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಜಿಲ್ಲಾಧಿಕಾರಿ ಡಿಸೆಂಬರ್ 15ರಂದು ಮಂಜೂರಾತಿ ನೀಡಿದ್ದರು.

ಕೇಂದ್ರ ಸರ್ಕಾರದ ಅಣುಶಕ್ತಿ ಸಚಿವಾಲಯದ ಮುಂಬೈ ಜಂಟಿ ಕಾರ್ಯದರ್ಶಿಯಾಗಿ ಸಿ.ಡಿ.ಎಸ್. ವೆಂಕಟರತ್ನ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೊಂದಿಗೆ ಬಾಬಾ ಅಣುಸಂಶೋಧನಾ ಕೇಂದ್ರದ ಯೋಜನಾ ನಿರ್ದೇಶಕರಾದ ಟಿ.ಕೆ. ಬೇರಾ, ಎಸ್. ಸರ್ಕಾರ್, ಹಣಕಾಸು ಸಲಹೆಗಾರ ಎ. ರಾಮಯ್ಯ, ಮುಖ್ಯ ಆಡಳಿತಾಧಿಕಾರಿ ಕೆ.ಬಿ.ಜೆ. ತಿಳ್ಳೇಖಾನ್, ಉಪ ವಿಭಾಗಾಧಿಕಾರಿ ಟಿ. ವೆಂಕಟೇಶ್, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಮೂಡಲಗಿರಿಯಪ್ಪ, ಪ್ರೊಬೇಷನರಿ ಉಪ ವಿಭಾಗಾಧಿಕಾರಿ ಡಾ.ಸ್ನೇಹಾ ಮತ್ತಿತರರು ಹಾಜರಿದ್ದರು. 
                              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.