ADVERTISEMENT

ಅರಣ್ಯ ಒತ್ತುವರಿ ಜಾಗ ತೆರವು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 19:00 IST
Last Updated 5 ಫೆಬ್ರುವರಿ 2011, 19:00 IST

ಕುಶಾಲನಗರ: ಉತ್ತರ ಕೊಡಗಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸರಹದ್ದಿಗೆ ಸೇರಿದ ಮೀನುಕೊಲ್ಲಿ ಮೀಸಲು ಅರಣ್ಯಕ್ಕೆ ಸೇರಿದ ಊರುಡುವೆ ಎಂಬ ಜಾಗದಲ್ಲಿ ಕಳೆದ ಕೆಲವು ದಿನಗಳಿಂದ ಜೋಪಡಿ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದ ಬುಡಕಟ್ಟು ಕೃಷಿಕರ ಸಮುದಾಯಕ್ಕೆ ಸೇರಿದ 12 ಕುಟುಂಬಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ತೆರವು ಮಾಡುತ್ತಿದ್ದ ಸಂದರ್ಭ ಗಿರಿಜನರು ವಿರೋಧ ಸೂಚಿಸಿ ಪ್ರತಿಭಟಿಸಿದರು.

 ಅರಣ್ಯ ಇಲಾಖೆ ವತಿಯಿಂದ ಪೊಲೀಸರ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆದಾಗ ಗಿರಿಜನರು ತಮ್ಮ ಕುಟುಂಬಗಳನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದೆಂದು ಪಟ್ಟುಹಿಡಿದರು.

 ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಬುಡಕಟ್ಟು ಕೃಷಿಕರ ಸಂಘ ಅಧ್ಯಕ್ಷ ಜೆ.ಪಿ.ರಾಜು, ಜಿ.ಪಂ. ಮಾಜಿ ಸದಸ್ಯ ಆರ್.ಕೆ.ಚಂದ್ರು, ಗಿರಿಜನರ ಸಮಸ್ಯೆಗಳನ್ನು ಆಲಿಸಿ ಅರಣ್ಯ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ ಗಿರಿಜನರ ಕುಟುಂಬಗಳಿಗೆ ಯಾವುದೇ ಕಾರಣಕ್ಕೂ ಕಿರುಕುಳ ನೀಡಬಾರದು ಎಂದು ಮನವಿ ಮಾಡಿದರು.

 ಗಿರಿಜನರ ಪ್ರತಿಭಟನೆ ತೀವ್ರಗೊಂಡಾಗ ಸ್ಥಳಕ್ಕಾಗಮಿಸಿದ ಕುಶಾಲನಗರ ಆರ್‌ಎಫ್‌ಓ ಎಂ.ಎಸ್.ಚಿಣ್ಣಪ್ಪ, ‘ಅರಣ್ಯ ಹಕ್ಕುಗಳ ಕಾಯ್ದೆಯಂತೆ 2005ರಿಂದೀಚೆಗೆ ಅರಣ್ಯಕ್ಕೆ ಸೇರಿದ ಜಾಗದಲ್ಲಿ ಯಾರೂ ಕೂಡ ಹೊಸದಾಗಿ ಜೋಪಡಿ ನಿರ್ಮಿಸಿ ನೆಲೆಸುವಂತಿಲ್ಲ’ ಎಂದರು. 12 ಕುಟುಂಬಗಳನ್ನು ತೆರವುಗೊಳಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

 ಅರಣ್ಯ ಇಲಾಖೆಯು ಅರಣ್ಯ ಹಕ್ಕುಗಳನ್ನು ಉಲ್ಲಂಘಿ ಸದೆ ಗಿರಿಜನರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ರಾಜು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.