ಕಲ್ಯಾಣಪುರ (ಉಡುಪಿ ಜಿಲ್ಲೆ): ಕ್ಯಾಥೋಲಿಕ್ ಕ್ರೈಸ್ತರು ಹಲವು ವರ್ಷಗಳಿಂದ ನಿರೀಕ್ಷಿಸುತ್ತಿದ್ದ ಉಡುಪಿ ಧರ್ಮಪ್ರಾಂತ್ಯ ರಚನೆಯು ಧರ್ಮಾಧ್ಯಕ್ಷರ ಪೀಠಾರೋಹಣದೊಂದಿಗೆ ಸೋಮವಾರ ನನಸಾಯಿತು.
ಕಲ್ಯಾಣಪುರದ ಮಿಲಾಗ್ರಿಸ್ ಚರ್ಚ್ನಲ್ಲಿ ನಡೆದ ಸಮಾರಂಭದಲ್ಲಿ ಉಡುಪಿಯ ಪ್ರಥಮ ಧರ್ಮಾಧ್ಯಕ್ಷರಾಗಿ ಡಾ.ಜೆರಾಲ್ಡ್ ಐಸಾಕ್ ಪ್ರಮಾಣ ವಚನ ಸ್ವೀಕರಿಸಿದರು. ಸಮಾರಂಭದಲ್ಲಿ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಿಂದ 10ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು, 20ಮಂದಿ ಧರ್ಮಾಧ್ಯಕ್ಷರು, 200 ಕ್ಕೂ ಅಧಿಕ ಧರ್ಮಗುರುಗಳು, ಧರ್ಮ ಭಗಿನಿಯರು ಭಾಗವಹಿಸಿದರು.
ಪೋಪ್ ಬೆನೆಡಿಕ್ಟ್ -16 ಅವರು ಕಳೆದ ಜುಲೈ 16 ರಂದು, ಉಡುಪಿ ಧರ್ಮಪ್ರಾಂತ್ಯವನ್ನು ಮಂಗಳೂರು ಧರ್ಮಪ್ರಾಂತ್ಯದಿಂದ ಪ್ರತ್ಯೇಕ ಮಾಡಿ ಆದೇಶ ಹೊರಡಿಸಿದ್ದರು. ಇದೇ ಸಮಯ ಪ್ರಸ್ತುತ ಶಿವಮೊಗ್ಗ ಧರ್ಮಾಧ್ಯಕ್ಷರಾದ ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ಉಡುಪಿಯ ಪ್ರಾಂತ್ಯದ ಧರ್ಮಾಧ್ಯಕ್ಷರನ್ನಾಗಿ ನೇಮಿಸಿದ್ದರು. ಉಡುಪಿ ಧರ್ಮಪ್ರಾಂತ್ಯದಲ್ಲಿ ಉಡುಪಿ ಜಿಲ್ಲೆಯ ಮೂರು ತಾಲ್ಲೂಕುಗಳ 48 ಚರ್ಚ್ಗಳು ಮತ್ತು ಅಲ್ಲಿರುವ 1.25 ಲಕ್ಷ ಕೆಥೋಲಿಕ್ ಕ್ರೈಸ್ತರು ಒಳಗೊಂಡಿರುವರು.
ಪೋಪ್ ಜಗದ್ಗುರುಗಳ ಭಾರತದ ಪ್ರತಿನಿಧಿ ಸಾಲ್ವತೋರ್ ಪೆನಿಚಿಯೊ, ಬೆಂಗಳೂರಿನ ಆರ್ಚ್ ಬಿಷಪ್ ಬರ್ನಾಡ್ ಮೊರಾಸ್, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅಲೋಶಿಯಸ್ ಪೌಲ್ ಡಿ~ಸೋಜ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.