ಕಾರಟಗಿ: ಪಾದಯಾತ್ರೆಯ 23 ದಿನಗಳಲ್ಲಿ ಜನರ ಕಷ್ಟಗಳ ದರ್ಶನವಾಗಿದೆ. ಜನರ ಮುಖದಲ್ಲಿ ದುಃಖ ಕಳೆದು ನಗು ಮೂಡಿಸಿ, ಕಷ್ಟಗಳ ಪರಿಹಾರವಾಗಲು ಬಿ.ಎಸ್.ಆರ್. ಪಕ್ಷವನ್ನು ಬೆಂಬಲಿಸಿ, ಆಶೀರ್ವದಿಸಬೇಕು. ಕೊಟ್ಟ ಮಾತಿಗೆ ತಪ್ಪಿದರೆ ನೇಣು ಹಾಕಿಕೊಳ್ಳುವೆ ಎಂದು ಬಿ.ಎಸ್.ಆರ್. ಪಕ್ಷದ ಸಂಸ್ಥಾಪಕ, ಶಾಸಕ ಬಿ. ಶ್ರೀರಾಮಲು ಹೇಳಿದರು.
ಸಮೀಪದ ಮರ್ಲಾನಹಳ್ಳಿಯಲ್ಲಿ ಅಭಿಮಾನಿಗಳಿಂದ ಬುಧವಾರ ಅದ್ದೂರಿ ಸ್ವಾಗತದ ಬಳಿಕ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬೀಕರ ಬರಗಾಲವಿದೆ. ಜನರು ಗುಳೆ ಹೋಗುತ್ತಿದ್ದಾರೆ. ಜನ, ಜಾನುವಾರುಗಳಿಗೆ ನೀರು, ಮೇವು ಇಲ್ಲ. ಸರ್ಕಾರ ಕೇಂದ್ರದ ಕಡೆ ಬೊಟ್ಟು ಮಾಡಿದರೆ ಸಂಕಷ್ಟಗಳು ಬಗೆಹರಿಯುವುದಿಲ್ಲ. ಲಕ್ಷ ರೂಪಾಯಿ ಬಜೆಟ್ನಲ್ಲಿ ಶೇಕಡಾ 5ರಷ್ಟು ಬರ ಪರಿಹಾರಕ್ಕೆ ಬಳಸಿದ್ದರೆ, ಪಾದಯಾತ್ರೆಯ ಅವಶ್ಯಕತೆ ಇರಲಿಲ್ಲ ಎಂದರು.
ರಾಜಧಾನಿ ಬಿಟ್ಟು ಕದಲದ ಸ್ಥಿತಿ ಸಿ.ಎಂ.ಗೆ ಇದೆ. ಬರೀ ರಾಜೀನಾಮೆ ಪ್ರಹಸನಗಳು ಕುರ್ಚಿಗಾಗಿ ನಡೆಯುವ ಬದಲು ಜನರ ಸಂಕಷ್ಟ ನಿವಾರಣೆಗೆ ನಡೆಯಬೇಕಿತ್ತು. ರಾಜ್ಯದಲ್ಲಿಯ ದೊಂಬರಾಟಗಳನ್ನು ನೋಡಿದರೆ ಸರ್ಕಾರ ಇದೆಯೇ ಎಂಬಂತಿದೆ ಎಂದು ಕಿಡಿಕಾರಿದರು.ಬಿಎಸ್ಆರ್ ಅಧಿಕಾರಕ್ಕೆ ಬಂದರೆ ತುಂಗಭದ್ರಾ ಜಲಾಶಯದ ಹೂಳು ತೆಗೆಸಿ, 10 ತಿಂಗಳು ನೀರು ಒದಗಿಸಲಾಗುವುದು. 12 ತಾಸು ನಿರಂತರವಾಗಿ ವಿದ್ಯುತ್ ನೀಡಲಾಗುವುದು, ಬೆಳೆಯ ಆರಂಭದಲ್ಲೆ ಬೆಲೆ ಘೋಷಿಸಲಾಗುವುದು ಸೇರಿದಂತೆ ಪಕ್ಷದ ಪ್ರಣಾಳಿಕೆಯನ್ನು ಅವರು ತೆರೆದಿಟ್ಟರು.
ಪ್ರಮುಖರಾದ ಡಾ. ಮಹಿಪಾಲ, ಕೆ.ಕರಿಯಪ್ಪ ಮಾತನಾಡಿದರು. ಮಾಧವಾ ನಂದ ಮಹಾರಾಜ್ ಸಾನ್ನಿಧ್ಯ, ನರಸಿಂಹರಾವ್ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ನೆಕ್ಕಂಟಿ ನಾಗರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ಜೆ. ತಿಪ್ಪಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂಸಿಂಗ್, ಪ್ರಮುಖರಾದ ಸುಬ್ಬಾರಾವ್, ಬಿಲ್ಗಾರ್ ಹನುಮಂತಪ್ಪ, ರಂಗಸುಬ್ಬಣ್ಣ ಮೊದಲಾದವರು ವೇದಿಕೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.