ಚಿಕ್ಕಮಗಳೂರು: ಕೃಷಿ ಭೂಮಿಗೆ ದಾಳಿ ಮಾಡುವ ಕಾಡಾನೆಗಳ ಹಾವಳಿ ನಿಯಂತ್ರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಸಣ್ಣ ಬೆಳೆಗಾರರ ಸಂಘ ನೇತೃತ್ವದಲ್ಲಿ ಕೃಷಿಕರು ಅರಣ್ಯ ಇಲಾಖೆ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಮೂಡಿಗೆರೆ ತಾಲ್ಲೂಕಿನಲ್ಲಿ ಕಾಡಾನೆ ಹಾವಳಿ ಹೆಚ್ಚಿದೆ. ಹಾಡಹಗಲೇ ಜಮೀನಿಗೆ ನುಗ್ಗುತ್ತಿವೆ. ರೈತರು ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ. ಅರಣ್ಯ ಇಲಾಖೆ, ಜನಪ್ರತಿನಿಧಿಗಳು ಕಿಂಚಿತ್ತೂ ಗಮನಹರಿಸುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಬತ್ತ, ಅಡಿಕೆ, ಬಾಳೆ, ಏಲಕ್ಕಿ, ಕಾಫಿ, ತೆಂಗು ಬೆಳೆಗೆ ಹಾನಿಯಾಗಿದೆ. ಅರಣ್ಯ ಇಲಾಖೆ ಅಕೇಶಿಯಾ, ಸಾಗುವಾನಿ ಮರ ಬೆಳೆಸುತ್ತಿರುವುದರಿಂದ ಆಹಾರವಿಲ್ಲದಂತಾಗಿ ಆನೆಗಳು ನಾಡಿಗೆ ನುಗ್ಗುತ್ತಿವೆ. ಶಾಲೆಗೆ ಕಿ.ಮೀ.ಗಟ್ಟಲೆ ನಡೆಯಬೇಕಾದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ತೊರೆಯುವಂತಾಗಿದೆ ಎಂದು ದೂರಿದ ರೈತರು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರಿಗೆ ಪರಿಸ್ಥಿತಿಯ ಮನವರಿಕೆ ಮಾಡಿಕೊಟ್ಟರು.
ದುಗ್ಗಪ್ಪಗೌಡ, ದಯಾಕರ, ಮನೋಜ್, ಚಂದ್ರೇಗೌಡ, ನಾಗೇಶ್, ಕುಮಾರ್, ಜಗನ್ನಾಥ, ಪಾಯಿಸ್ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.