ADVERTISEMENT

ರಾಜಕೀಯ ಪ್ರೇರಿತ ಹೋರಾಟ; ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2011, 19:30 IST
Last Updated 5 ಜೂನ್ 2011, 19:30 IST

ಚನ್ನರಾಯಪಟ್ಟಣ: ಕಪ್ಪು ಹಣದ ವಿರುದ್ಧ ಯೋಗ ಗುರು ಬಾಬಾ ರಾಮ್ ದೇವ್ ನಡೆಸುತ್ತಿರುವ ಹೋರಾಟ ರಾಜಕೀಯ ಪ್ರೇರಿತವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಭಾನುವಾರ ಟೀಕಿಸಿದರು.

ಸಮೀಪದ ಬರಗೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಸಮರ ಸಾರಿರುವುದು ಸರಿ. ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರಲು ನಮ್ಮ ಬೆಂಬಲವಿದೆ. ಆದರೆ ಇವರ ಹೋರಾಟ ರಾಜಕೀಯ ಪಕ್ಷದ ಪ್ರಚಾರದಂತೆ ಕಂಡುಬರುತ್ತಿದೆ. ಅವರ ಒಂದು ಪಕ್ಷದ ಪರ ಇದ್ದಾರೆ ಎಂದು ದೂರಿದರು.

ಸಂಸದ ಎಚ್. ವಿಶ್ವನಾಥ್ ಮಾತನಾಡಿ, ಕಪ್ಪು ಹಣದ ವಿರುದ್ಧ ರಾಮಲೀಲಾ ಮೈದಾನದಲ್ಲಿ ಹೋರಾಟ ಆರಂಭಿಸಿರುವ ರಾಮ್‌ದೇವ್ ಅವರನ್ನು ಬಂಧಿಸಿಲ್ಲ. ಬದಲಿಗೆ ಸಂಧಾನಕ್ಕೆ ಕರೆತರಲಾಗಿದೆ ಅಷ್ಟೇ ಎಂದರು.

ಶ್ರವಣಬೆಳಗೊಳದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ವಿದೇಶದಿಂದ ಕಪ್ಪು ಹಣ ವಾಪಸ್ ತರಬೇಕು ಎಂಬ ಉದ್ದೇಶ ಶ್ಲಾಘನೀಯ. ಈ ಬಗ್ಗೆ ಹೋರಾಟ ಪಾರದರ್ಶಕವಾಗಿರಬೇಕು. ರಾಮ್‌ದೇವ್ ಆರಂಭಿಸಿರುವ ಹೋರಾಟಕ್ಕೆ ಬೆಂಬಲ ನೀಡಿರುವವರನ್ನು ಗಮನಿಸಿದರೆ ಅನುಮಾನ ಬರುತ್ತದೆ. ಈ ಹೋರಾಟವನ್ನು ಜನಸಾಮಾನ್ಯರು ಬೆಂಬಲಿಸಬೇಕು. ಇದು ಪಕ್ಷಾತೀತವಾಗಿರಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.