ADVERTISEMENT

ರಾಜ್ಯದ 90 ಜನರ ಪ್ರತಿಭಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಮಂಗಳೂರು: ನಗರದಲ್ಲಿ ಇದೇ 12ರಿಂದ 16ರ ವರೆಗೆ ನಡೆಯಲಿರುವ 17ನೇ ರಾಷ್ಟ್ರೀಯ ಯುವಜನೋತ್ಸವದ ಸ್ಪರ್ಧಾ ವಿಭಾಗದಲ್ಲಿ ರಾಜ್ಯದ 55 ಮಂದಿ ಹಾಗೂ ಸ್ಪರ್ಧೇತರ ವಿಭಾಗದಲ್ಲಿ 35 ಮಂದಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

ವಿಶೇಷವೆಂದರೆ ಆತಿಥೇಯ ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬನೇ ಒಬ್ಬ ಸ್ಪರ್ಧಿ ಇಲ್ಲ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸ್ಪರ್ಧಿಸಲಿರುವ ಉಡುಪಿಯ ಎಚ್.ಉಷಾ ಅವರನ್ನು ಬಿಟ್ಟರೆ ಕರಾವಳಿ ಕರ್ನಾಟಕದ ಭಾಗದಿಂದ ಒಬ್ಬರೇ ಒಬ್ಬರು ಸ್ಪರ್ಧಿಗಳೂ ಇಲ್ಲ. ಹೆಸರು ನೋಂದಾಯಿಸುವ ಅವಧಿ ಕೊನೆಗೊಂಡಿರುವುದರಿಂದ ರಾಜ್ಯದಿಂದ ಇಷ್ಟು ಮಂದಿ ಮಾತ್ರ ತಮ್ಮ ಪ್ರತಿಭೆ ಪ್ರದರ್ಶಿಸುವ ಸಾಧ್ಯತೆ ಇದೆ.

ಸ್ಪರ್ಧಾ ವಿಭಾಗದಲ್ಲಿ ಶಿಕಾರಿಪುರದ 17 ಮಂದಿ, ಬೆಂಗಳೂರಿನ 16 ಮಂದಿ ಮತ್ತು ಚಾಮರಾಜನಗರದ 11 ಮಂದಿ ಇದ್ದಾರೆ. ಸ್ಪರ್ಧೇತರ ವಿಭಾಗದಲ್ಲಿ ಕಾರ್ಯಕ್ರಮ ನೀಡಲು ಮಂಡ್ಯದ ಯುವಕರಿಗೆ ದೊಡ್ಡ ಅವಕಾಶ ಸಿಕ್ಕಿದ್ದು, 35ರಲ್ಲಿ 27 ಮಂದಿ ಅವರೇ ಇದ್ದಾರೆ. ಜಾನಪದ ನೃತ್ಯ ವಿಭಾಗದಲ್ಲಿ ಈ ಯುವಕರು ಪಾಲ್ಗೊಳ್ಳಲಿದ್ದಾರೆ.

ಮಂಗಳ ಕ್ರೀಡಾಂಗಣದಲ್ಲಿನ ಪ್ರಧಾನ ವೇದಿಕೆ ನಿರ್ಮಾಣ ಕಾರ್ಯ ಬಹುತೇಕ ಕೊನೆಗೊಂಡಿದೆ. 13ರಂದು ಸಂಜೆ  ಹರಿಹರನ್ ಮತ್ತು ಲೆಸ್ಲಿ ಲೂಯಿಸ್ ಅವರಿಂದ ಸಂಗೀತ ರಸಸಂಜೆ, 14ರಂದು ಯುಪೋರಿಯಾ ತಂಡದ ರಾಕ್‌ಷೋ, 15ರಂದು ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫೋನ್, ನರಸಿಂಹಲು ವಡವಾಟಿ ಅವರ ಕ್ಲ್ಯಾರಿಯೊನೆಟ್, ಶಿವಮಣಿ ಅವರ ಡ್ರಮ್ಸ ಮತ್ತು ಪ್ರವೀಣ್ ಗೋಡ್ಖಿಂಡಿ ಅವರ ಕೊಳಲು ವಾದನವಿದೆ.

16ರಂದು ವಸುಂಧರಾ ದಾಸ್ ಅವರಿಂದ ಸಂಗೀತ ಸಂಜೆ ಹಾಗೂ ಕುದ್ರೋಳಿ ಗಣೇಶ್ ಅವರಿಂದ ಇಂದ್ರಜಾಲ ಪ್ರದರ್ಶನವಿದೆ. ಜತೆಗೆ ಈ ನಾಲ್ಕೂ ದಿನ ಯಕ್ಷಗಾನ ಸಹಿತ ಸ್ಥಳೀಯ ಸಾಂಸ್ಕೃತಿಕ ವೈವಿಧ್ಯಗಳು ಜನಮನ ಸೂರೆಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.