ADVERTISEMENT

ಸಂಸದ, ಶಾಸಕರ ಮುಂದುವರೆದ ಜಗಳ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2011, 19:30 IST
Last Updated 30 ಆಗಸ್ಟ್ 2011, 19:30 IST
ಸಂಸದ, ಶಾಸಕರ ಮುಂದುವರೆದ ಜಗಳ
ಸಂಸದ, ಶಾಸಕರ ಮುಂದುವರೆದ ಜಗಳ   

ತುಮಕೂರು: `ಹಸಿರು ತುಮಕೂರು~ ಯೋಜನೆಗೆ ಸಸಿ ನೀಡುವ ಸಂಬಂಧ ಶಾಸಕ ಎಸ್.ಶಿವಣ್ಣ, ಸಂಸದ ಜಿ.ಎಸ್.ಬಸವರಾಜು ನಡುವಿನ ಒಳಜಗಳ ಮುಂದುವರೆದಿದೆ.

ಮಂಗಳವಾರ ನಗರದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಸಂಘ, ಜಿಲ್ಲಾಡಳಿತ, ಜಿಲ್ಲಾ ಕೈಗಾರಿಕಾ ಕೇಂದ್ರ, ಟೂಡ, ಅರಣ್ಯ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್.ಬಸವರಾಜು ಅವರು ಶಾಸಕರ ಹೆಸರನ್ನು ಪ್ರಸ್ತಾಪಿಸದೆ ಪರೋಕ್ಷವಾಗಿ ಟೀಕಾ ಪ್ರಹಾರ ನಡೆಸಿದರು.

`ಹಸಿರು ನಗರ~ವನ್ನಾಗಿ ಮಾಡುವ ಉದ್ದೇಶದಿಂದ ಹಮ್ಮಿಕೊಂಡಿರುವ ಸಸಿ ನೆಡುವ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆ ಗಿಡ ನೀಡದಂತೆ ರಾಜಕೀಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಕೋಪ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಶಾಸಕ ಎಸ್.ಶಿವಣ್ಣ ಆಹ್ವಾನಿತರಾಗಿದ್ದರೂ ಗೈರು ಹಾಜರಾಗಿದ್ದರು.

ಅರಣ್ಯ ಇಲಾಖೆ ಅಗತ್ಯ ಸಸಿಗಳನ್ನು ನೀಡಬೇಕು. ಕಾನೂನಿನ ತೊಡಕು ಮುಂದಿಟ್ಟುಕೊಂಡು ಸಸಿ ನೀಡುವುದನ್ನು 45 ದಿನ ತಡ ಮಾಡಿದೆ. ಸಸಿ ನೆಡಲು, ಸಸಿ ವಿತರಿಸಲು `ಯಾವುದೇ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ~ ಎಂದು ಕಿಡಿಕಾರಿದರು.

ಸಂಸದರಿಗೆ ಪ್ರತಿಯಾಗಿ ಶಾಸಕರ ಪರ ಎಂದು ಹೇಳಲಾಗುತ್ತಿರುವ ಟೂಡ, ನಗರಸಭೆ ಹಮ್ಮಿಕೊಂಡಿರುವ ಉದ್ಯಾನವನಗಳಲ್ಲಿ ಗಿಡ ನೆಡುವ ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಿದ ಸಂಸದರು, ಯಾರೇ ಗಿಡ ನೆಟ್ಟರೂ ಸ್ವಾಗತ. ಒಟ್ಟಾರೆ ತುಮಕೂರು ಹಸಿರೀಕರಣ ಆಗಬೇಕು ಎಂದು ಮಾರ್ಮಿಕವಾಗಿ ನುಡಿದರು.

ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಉಪಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಮಹಾಮಂಡಳ ಅಧ್ಯಕ್ಷ ಟಿ.ಆರ್.ಲೋಕೇಶ್, ಟೂಡ ಆಯುಕ್ತ ಆದರ್ಶಕುಮಾರ್, ಡಿಐಸಿ ಉಪನಿರ್ದೇಶಕ ಶಿವಪ್ಪ, ಇತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.