ADVERTISEMENT

ಸುಳ್ಳು ಆದಾಯ ಪತ್ರ: ಜಿ.ಪಂ. ಸದಸ್ಯತ್ವ ರದ್ದು

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ಸಾಗರ: ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಆದಾಯಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿ ಪ್ರಮಾಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಹೊಸನಗರ ತಾಲ್ಲೂಕು ಕಸಬಾ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯೆ ಜ್ಯೋತಿ ಚಂದ್ರಮೌಳಿ ಅವರ ಸದಸ್ಯತ್ವ ರದ್ದುಗೊಳಿಸಿ ಹೆಚ್ಚುವರಿ ವ್ಯವಹಾರ ನ್ಯಾಯಾಧೀಶರ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.

ಹಿಂದಿನ ವರ್ಷ ನಡೆದ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಕಸಬಾ ಬಿಸಿಎಂ ~ಬಿ~ ಮಹಿಳಾ ಮೀಸಲಾತಿಗೆ  ಕ್ಷೇತ್ರವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಜ್ಯೋತಿ ಚಂದ್ರಮೌಳಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ವಜ್ರಾವತಿ ಸ್ಪರ್ಧಿಸಿದ್ದು ಜ್ಯೋತಿ ಚಂದ್ರಮೌಳಿ ಗೆಲುವು ಸಾಧಿಸಿದ್ದರು.

ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜ್ಯೋತಿ ಚಂದ್ರಮೌಳಿ  ತಮ್ಮ ಕುಟುಂಬಕ್ಕೆ  ವಾರ್ಷಿಕ ರೂ 75 ಸಾವಿರ ಆದಾಯ ಇರುವುದಾಗಿ ಹೇಳಿ ಜಾತಿ ದೃಢೀಕರಣ ಪತ್ರ ನೀಡಿ ಮೀಸಲಾತಿ ಅಡಿ ಸ್ಪರ್ಧಿಸಿದ್ದರು.
ಆದರೆ, ಜ್ಯೋತಿ ಚಂದ್ರಮೌಳಿ ಅವರ ಕುಟುಂಬಕ್ಕೆ ಎರಡು ಲಕ್ಷಕ್ಕಿಂತ ಹೆಚ್ಚಿನ  ವಾರ್ಷಿಕ ಆದಾಯವಿದ್ದು, ಈ ವಿಷಯವನ್ನು ಮುಚ್ಚಿಟ್ಟು ಅವರು ನಾಮಪತ್ರ ಸಲ್ಲಿಸಿದ್ದಾರೆ. ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಬೇಕು ಎಂದು ವಜ್ರಾವತಿ ಇಲ್ಲಿನ ಕೋರ್ಟ್‌ಗೆ  ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಜ್ಯೋತಿ ಚಂದ್ರಮೌಳಿ ಅವರ ಪತಿ ಕಲ್ಲು ಕ್ವಾರೆ  ಉದ್ಯಮ ನಡೆಸುತ್ತಿದ್ದು, ವಾರ್ಷಿಕ ಎರಡು ಲಕ್ಷಕ್ಕಿಂತ ಹೆಚ್ಚಿನ  ಆದಾಯ ಹೊಂದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಬಿಸಿಎಂ. ~ಬಿ~ ಮಹಿಳಾ ಮೀಸಲಾತಿ ಸೌಲಭ್ಯ ಪಡೆಯಲು ಜ್ಯೋತಿ ಅವರು ಅರ್ಹರಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಎರಡನೇ ಅತಿ ಹೆಚ್ಚು ಮತ ಪಡೆದ ಬಿಜೆಪಿ ಅಭ್ಯರ್ಥಿ ವಜ್ರಾವತಿ ವಿಜೇತ ಅಭ್ಯರ್ಥಿ ಎಂದು ನ್ಯಾಯಾಧೀಶರಾದ ಜಿ.ಎ. ಮಂಜುನಾಥ್ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.