ADVERTISEMENT

ಎರಡು ಉಪಮುಖ್ಯಮಂತ್ರಿ ಹುದ್ದೆ ಕಾನೂನುಬಾಹಿರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 9:50 IST
Last Updated 16 ಜುಲೈ 2012, 9:50 IST

ಬಾಗಲಕೋಟೆ: ಕಾನೂನಿಗೆ ವಿರುದ್ಧವಾಗಿ ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸಿದ್ದು ಏಕೆ ಎಂದು ರಾಜ್ಯದ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ಈ ಸ್ಥಾನಗಳ ಸೃಷ್ಟಿ ಹಿಂದೆ ರಾಜ್ಯದ ಅಭಿವೃದ್ಧಿಯ ಉದ್ದೇಶ ಅಡಗಿಲ್ಲ ಎಂದು ಅಭಿಪ್ರಾಯಪಟ್ಟರು.

ಕೂಡಲಸಂಗಮದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ `ಶರಣು ಸಮರ್ಪಣೆ~ ಕಾರ್ಯಕ್ರಮ ಉದ್ಘಾಟಿಸಿದ ಅವರು, `ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ ಮಾದರಿಯಲ್ಲಿ ಆಡಳಿತ ನಡೆಸುತ್ತೇನೆ~ ಎಂಬ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಬಸವಣ್ಣನ ಆದರ್ಶ ದಂತೆ ಆಡಳಿತ ನಡೆಸಿ ಎಂದು ಸಲಹೆ ನೀಡಿದರು.

ಭ್ರಷ್ಟಾಚಾರ, ಭೂಕಬಳಿಕೆ ಮತ್ತಿತರ ಆರೋಪದ ಮೇಲೆ ಜೈಲು ಸೇರುವ ಮೂಲಕ ರಾಜ್ಯಕ್ಕೆ ಅಪಕೀರ್ತಿ ತಂದ ವ್ಯಕ್ತಿಯನ್ನು ಆದರ್ಶವಾಗಿರಿಸಿಕೊಂಡು ಆಡಳಿತ ನಡೆಸುವ ಅಗತ್ಯವಿಲ್ಲ ಎಂದರು.

ಬರ ನಿರ್ವಹಣೆಗೆ ರಾಜ್ಯ ಸರ್ಕಾರ  ಎರಡು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಮುಖ್ಯಮಂತ್ರಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ ಅವರು, ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಮಾಡಿರುವ ಖರ್ಚಿನ ಲೆಕ್ಕ ಕೊಡಿ ಎಂದು ತಾಕೀತು ಮಾಡಿದರು.

ಚುನಾವಣೆಗೆ ಸಿದ್ಧತೆ:
ಅಸ್ಥಿರವಾಗಿರುವ ರಾಜ್ಯ ಸರ್ಕಾರ ಯಾವ ಸಂದರ್ಭದಲ್ಲಾದರೂ ಬಿದ್ದು ಹೋಗುವ ಸಾಧ್ಯತೆ ಇರುವ ಕಾರಣ ಕಾಂಗ್ರೆಸ್ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅರ್ಹ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.