ADVERTISEMENT

ಕಬ್ಬು ದರ ನಿಗದಿಗೆ ಒತ್ತಾಯಿಸಿ ಇಂದು ರ‌್ಯಾಲಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:40 IST
Last Updated 8 ಅಕ್ಟೋಬರ್ 2012, 8:40 IST

ಮುಧೋಳ: ಪ್ರಸಕ್ತ ಸಾಲಿನಲ್ಲಿ ಕಬ್ಬಿನ ದರ ನಿಗದಿಗೊಳಿಸಬೇಕು ಮತ್ತು ಹಿಂದಿನ ವರ್ಷಗಳ ಬಾಕಿ ಹಣವನ್ನು ಪಾವತಿಸಬೇಕು. ಈ ಕುರಿತು ಇದೇ 8ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಗರದಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡ ರಮೇಶ ಗಡದಣ್ಣವರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಬಾರಿ ರಿಕವರಿ ಆಧಾರದ ಮೇಲೆ ದರ ನಿಗದಿಗೊಳಿಸುವ ಎಸ್.ಎ.ಪಿ ಕಾಯ್ದೆಯನ್ವಯ ದರ ನಿಗದಿಗೊಳ್ಳುವವರೆಗೆ ಜಿಲ್ಲೆಯಲ್ಲಿ ಯಾರೂ ಕಾರ್ಖಾನೆಗಳಿಗೆ ಕಬ್ಬು ಕಳುಹಿಸಬಾರದು. ಮತ್ತು ಸರ್ಕಾರ ಕಾರ್ಖಾನೆಗಳನ್ನು ಪ್ರಾರಂಭಿಸಲು ಬಿಡಬಾರದು ಎಂಬುದು ಈ ಬಾರಿಯ ಹೋರಾಟದ ಮೂಲ ಉದ್ದೇಶವಾಗಿದೆ ಎಂದರು.

2010-11ರಲ್ಲಿ ಕಳಿಸಿದ ಕಬ್ಬಿಗೆ ಜಮಖಂಡಿಯ ಸಿದ್ದು ನ್ಯಾಮಗೌಡರ ಕಾರ್ಖಾನೆಯವರು ಮಾತ್ರ ಎರಡನೇ ಕಂತಿನಲ್ಲಿ ರೂ 300 ನೀಡಿದ್ದು, ಉಳಿದ 8 ಕಾರ್ಖಾನೆಯವರು ಇನ್ನೂ ರೂ 100 ಕೊಡಬೇಕು. ರೂ 70 ಕೋಟಿಯಷ್ಟು ಹಣ ಬಾಕಿ ಇದ್ದು, ತಕ್ಷಣವೇ ಪಾವತಿಸಬೇಕು. 2011-12ನೇಸಾಲಿನ ಪ್ರಥಮ ಕಂತಿನ ಮುಂಗಡ ಹಣ ಮತ್ತು ಎರಡನೇ ಕಂತಿನ ಬಾಕಿ ಹಣವನ್ನು ಕೂಡಾ ಕೇವಲ 2 ಕಾರ್ಖಾನೆಗಳನ್ನು ಹೊರತು ಪಡಿಸಿ ಯಾವ ಕಾರ್ಖಾನೆಗಳೂ ಕೊಟ್ಟಿಲ್ಲ. ತಕ್ಷಣದಲ್ಲಿಯೇ ಬ್ಯಾಂಕಿನ ಬಡ್ಡಿ ಸೇರಿಸಿ ಪಾವತಿಸಬೇಕ ಎಂದು ಆಗ್ರಹಿಸಿದರು.

ಸೋಮವಾರ ಬೆಳಿಗ್ಗೆ 10ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಭೆ ಸೇರಿ ಅಲ್ಲಿಂದ ತಹಶೀಲ್ದಾರ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಅದಕ್ಕೆ ಸರ್ಕಾರದಿಂದ ಪೂರಕ ಪ್ರತಿಕ್ರಿಯೆ ಸಿಗದಿದ್ದರೆ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುವುದು ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಶ ಸೋರಗಾಂವಿ ಮಾತನಾಡಿ ಖಾಸಗಿ ಕಾರ್ಖಾನೆಗಳ ಮಾಲೀಕರು ರೈತರಿಗೆ ಮೋಸ ಮಾಡುತ್ತಿದ್ದು, ಈ ಬಾರಿ ಎಸ್.ಎ.ಪಿ ಕಾಯ್ದೆ ಜಾರಿಯಾಗಬೇಕು ಮತ್ತು 2009-10ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ಎಫ್.ಆರ್.ಪಿ ದರ ರೂ 1400 ಇದ್ದಾಗ, ಉತ್ತರಖಂಡದ ಕಾರ್ಖಾನೆಗಳು ರೂ 2500 ನೀಡಿವೆ, ಆದರೆ ಇಲ್ಲಿನ ಕಾರ್ಖಾನೆಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ ಎಂದರು.

ಸುಭಾಷ ಶಿರಬೂರ, ಮುತ್ತಪ್ಪ ಕೋಮಾರ, ಪ್ರಕಾಶ ಲಿಂಬಿಕಾಯಿ, ಭಂಡು ಘಾಟಗೆ, ಮಹಾಂತೇಶ ಕಬ್ಬೂರ, ಶ್ರಿಶೈಲ ತೇಲಿ, ಸದಾಶಿವ ಕುಂಚನೂರ, ಮುತ್ತು ಹೊಸಕೋಟಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.