ADVERTISEMENT

ಕಾರಿನಲ್ಲಿ ಸಾಗಿಸುತ್ತಿದ್ದ ರೂ 21 ಲಕ್ಷ ನಗದು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 12:33 IST
Last Updated 17 ಏಪ್ರಿಲ್ 2013, 12:33 IST

ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ): ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ರೂ21 ಲಕ್ಷ ನಗದು ಹಣವವನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಇಲ್ಲಿಯ ರಾಣಿ ಚೆನ್ನಮ್ಮ ವೃತ್ತದಿಂದ ಬೆಳಗಾವಿ ಕಡೆಗೆ ಹೊರಟಿದ್ದ ಕಾರನ್ನು ಪೊಲೀಸರು ತಪಾಸಣೆ ನಡೆಸಿದಾಗ ಅದರಲ್ಲಿ ಈ ನಗದು ದೊರಕಿದೆ.

ಬೆಳಗಾವಿಯಲ್ಲಿ ವಾಸಿಸುತ್ತಿರುವ ರಾಜಸ್ಥಾನ ಮೂಲದ ಸುರೇನ್ ಸಿಂಗ್ ಹಾಗೂ ರಾಮೇಶ್ವರ ಎಂಬುವವರು ಕಾರಿನಲ್ಲಿ ಈ ಹಣ ಸಾಗಿಸುತ್ತಿದ್ದರು. ವಿಚಾರಣೆಗೆ ಒಳಪಡಿಸಿದಾಗ ಅವರಿಬ್ಬರೂ `ಈ ಹಣ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ, ನಾವು ಕಳೆದ ಇಪ್ಪತ್ತು ವರ್ಷಗಳಿಂದ ಇಲ್ಲಿ ಪಂಪ್ ಸೆಟ್ ಹಾಗೂ ಇತರ ಎಲೆಕ್ಟ್ರಿಕಲ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು ಅದರಿಂದ ವಸೂಲಾದ ಹಣ ಎಂದು ಹೇಳಿದ್ದಾರೆ. ಆದರೆ ಅವರು ಹಣ ಪಡೆದಿದ್ದಕ್ಕಾಗಿ ಯಾವುದೇ ರಸೀದಿ ಅಥವಾ ದಾಖಲೆಗಳನ್ನು ಒದಗಿಸದೇ ಇದ್ದುದರಿಂದ ಇದು ಅನುಮಾನಕ್ಕೆಡೆ ಮಾಡಿದೆ' ಎಂದು ಸಿಪಿಐ ಎಚ್.ಡಿ.ಮುದರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪಿಎಸ್‌ಐ ಶಕೀಲ್ ಅಂಗಡಿ ನೇತೃತ್ವ ದಲ್ಲಿ ಈ ಕಾರ್ಯಾಚರಣೆ ನಡೆದಿದ್ದು,  ಎಎಸ್‌ಐ  ಪಿ.ಆರ್.ಅಥಣಿ, ಎ.ಎಚ್. ಸಾಲಾಪುರ, ಬಿ.ಆರ್.ಜಗಲಿ, ವಿಶ್ವನಾಥ ಮುದರೆಡ್ಡಿ, ಪ್ರಕಾಶ ಎತ್ತಿನಮನಿ, ಜಗದೀಶ ಒಂಟಿ, ಸಿ.ಎಸ್.ಅಜ್ಜನಗೌಡರ ಹಾಗೂ ಬಿ.ಬಿ.ಕೋಳಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.