ಬಾಗಲಕೋಟೆ: ನಗರದ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ಛಲವಾದಿ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಸಂಘಟನಾ ಸಭೆ ಹಮ್ಮಿಕೊಳ್ಳಲಾಗಿತ್ತು.ಸಭೆಯಲ್ಲಿ ಮಾತನಾಡಿದ ವಕೀಲ ಬಸವರಾಜ ಬಾದಾಮಿ, ‘ಅಂಬೇಡ್ಕರ್ರವರು ಹೇಳಿದಂತೆ ರಾಜ್ಯಾಧಿಕಾರ ಸಿಗಬೇಕಾದರೆ ಸಂಘಟನೆ ಗಟ್ಟಿಯಾಗಿರಬೇಕು. ಆ ದಿಸೆಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಅಭಿವೃದ್ಧಿಗೆ ಒತ್ತು ಕೊಡುವಂತಾಗಬೇಕು’ ಎಂದರು.ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ಬಸವರಾಜ ಛಲವಾದಿ ಮಾತನಾಡಿ, ‘ಗ್ರಾಮೀಣ ಪ್ರದೇಶದ ವಾಸ್ತವ ಘಟನೆಗಳ ವಿವರ ನೀಡಿ ಸಂಘಟನೆಗಳು ತಳ ಮಟ್ಟದಲ್ಲಿ ಭದ್ರವಾಗಿದ್ದರೆ ಮಾತ್ರ ಜನಾಂಗದ ಅಭಿವೃದ್ಧಿ ಸಾಧ್ಯ’ ಎಂದರು.
ಛಲವಾದಿ ಮಹಾಸಭಾದ ನೂತನ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ನೀಲನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಘಟಕದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಪ್ರೇಮನಾಥ ಗರಸಂಗಿ ಅವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ತಿಪ್ಪಣ್ಣ ನೀಲನಾಯಕ, ‘ಸಮಾಜ ನೀಡಿರುವ ಜವಾಬ್ದಾರಿಯನ್ನು ಎಲ್ಲರ ಸಹಕಾರದೊಂದಿಗೆ ಸಮರ್ಥವಾಗಿ ನಿಭಾಯಿಸಿ, ಸಮಾಜ ಸಂಘಟನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲ ಎನ್.ಬಿ.ಗಸ್ತಿ, ‘ಪಕ್ಷಾತೀತವಾಗಿ ಸಮಾಜದ ಸಂಘಟನೆಗೆ ಎಲ್ಲರೂ ಕೈಜೋಡಿಸಬೇಕು. ಸಮಾಜದ ಅಭಿವೃದ್ಧಿಗೆ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.ಶಿಕ್ಷಕರಾದ ಶರಣಪ್ಪ ಛಲವಾದಿ, ಜಿ.ಬಿ. ಛಲವಾದಿ, ಮುಖಂಡರಾದ ಶ್ರೀಧರ ಚಿಕ್ಕಲಕಿ, ರಾಮಚಂದ್ರ ನಾಟಿಕಾರ, ಪ್ರೊ.ನಂಜುಂಡಸ್ವಾಮಿ, ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತಪ್ಪ ಮದೀನಕರ ಮಾತನಾಡಿದರು.
ಸಭೆಯಲ್ಲಿ ಮುಖಂಡರಾದ ಸಂಗಪ್ಪ ನಾರಾಯಣಿ, ಡಾ.ಶ್ರೀಶೈಲ ಛಲವಾದಿ, ಚಿಟ್ಟು ನೀಲನಾಯಕ, ಗಲಗಲಿಯ ಪ್ರಕಾಶ ನಾಗಪ್ಪಗೋಳ ಸೇರಿದಂತೆ ಸಮಾಜದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಹುನಗುಂದ, ಬೀಳಗಿ, ಮಧೋಳ ಹಾಗೂ ಬಾಗಲಕೋಟೆ ತಾಲ್ಲೂಕು ಸಂಘಟನೆಗಳ ಪದಾಧಿಕಾರಿಗಳು ಇದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗ್ಯಾನಪ್ಪ ಛಲವಾದಿ ನಿರೂಪಿಸಿ, ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.