ADVERTISEMENT

ಬಳ್ಳಾರಿ ಜಾಲಿ ಈಗ ಮದ್ದು!

ವೆಂಕಟೇಶ್ ಜಿ.ಎಚ್
Published 23 ಡಿಸೆಂಬರ್ 2017, 8:30 IST
Last Updated 23 ಡಿಸೆಂಬರ್ 2017, 8:30 IST
ದಾಳಿಂಬೆ ದುಂಡಾಣು ಮಾರಿ ನಿವಾರಣೆಗೆ ರಾಮಬಾಣ ಬಳ್ಳಾರಿ ಜಾಲಿ ಸೊಪ್ಪಿನ ಕಷಾಯ
ದಾಳಿಂಬೆ ದುಂಡಾಣು ಮಾರಿ ನಿವಾರಣೆಗೆ ರಾಮಬಾಣ ಬಳ್ಳಾರಿ ಜಾಲಿ ಸೊಪ್ಪಿನ ಕಷಾಯ   

ಬಾಗಲಕೋಟೆ: ಮುಳ್ಳು ಬೇಲಿಯಾಗಿ, ಗಟ್ಟಿ ಉರುವಲಾಗಿ ಬಳಕೆಯಾಗುತ್ತಿದ್ದ ಬಳ್ಳಾರಿ ಜಾಲಿ ಇನ್ನು ಮುಂದೆ ದಾಳಿಂಬೆಯ ದುಂಡಾಣು ರೋಗದ ನಿಯಂತ್ರಕ ಮದ್ದಾಗಿ ಬಳಕೆಯಾಗಲಿದೆ.

ಬಳ್ಳಾರಿ ಜಾಲಿಯ ಸೊಪ್ಪಿನಿಂದ ಕಷಾಯ ತಯಾರಿಸಿ ಅದನ್ನು ನೀರಲ್ಲಿ ಬೆರೆಸಿ ದಾಳಿಂಬೆ ಗಿಡಕ್ಕೆ ಸಿಂಪಡಿಸುವ ಕೆಲಸವನ್ನು ಇಲ್ಲಿನ ತೋಟಗಾರಿಕೆ ವಿಶ್ವವಿದ್ಯಾಲಯದ ಸಸ್ಯರೋಗ ವಿಜ್ಞಾನಿಗಳು ಮಾಡಿದ್ದಾರೆ. ಆ ಮೂಲಕ ದುಂಡಾಣು ರೋಗ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಾದಾಮಿ ತಾಲ್ಲೂಕು ಗೋವನಕೊಪ್ಪದಲ್ಲಿ ಕಳೆದ ವರ್ಷ ಪ್ರಾಯೋಗಿಕವಾಗಿ ಕಷಾಯ ಬಳಕೆ ಮಾಡಿ ರೋಗ ನಿಯಂತ್ರಣಕ್ಕೆ ತರಲಾಗಿದೆ. ಈಗ ತೋಟಗಾರಿಕೆ ಮೇಳದಲ್ಲಿ ಅದನ್ನು ದಾಳಿಂಬೆ ಬೆಳೆಗಾರರಿಗೆ ಪರಿಚಯಿಸಲಾಗುತ್ತಿದೆ ಎಂದು ಸಸ್ಯರೋಗ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎ.ಪಿ.ಕಿರಣ್‌ಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಶೇ 70ರಷ್ಟು ನಿಯಂತ್ರಣ: ‘ಬಳ್ಳಾರಿ ಜಾಲಿ ಸೊಪ್ಪನ್ನು ಚೆನ್ನಾಗಿ ರುಬ್ಬಿ ಅದರ ರಸವನ್ನೇ ಕಷಾಯವಾಗಿ ಬಳಕೆ ಮಾಡಲಾಗುತ್ತದೆ. 50 ಗ್ರಾಂ ಸೊಪ್ಪಿನಿಂದ ತಯಾರಿಸಿದ ರಸವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಅದನ್ನು ಗಿಡಗಳಿಗೆ ಸಿಂಪಡಿಸಬೇಕಿದೆ. ಇದರಿಂದ ಶೇ 70ರಷ್ಟು ರೋಗ ನಿಯಂತ್ರಣ ಸಾಧ್ಯ’ ಎನ್ನುತ್ತಾರೆ ಕಿರಣ್‌ಕುಮಾರ.

‘ಈಗ ದುಂಡಾಣು ರೋಗಕ್ಕೆ ಸ್ಟ್ರೆಪ್ಟೊಸೈಕ್ಲಿನ್ ಎಂಬ ದ್ರಾವಣವನ್ನು ಬೆಳೆಗಾರರು ಸಿಂಪಡಿಸುತ್ತಾರೆ. ಅದರ ಬದಲಿಗೆ ಇಲ್ಲವೇ ಅದರೊಂದಿಗೆ ಕಷಾಯ ಬೆರೆಸಿದಲ್ಲಿ ಪರಿಣಾಮಕಾರಿ ನಿಯಂತ್ರಣ ಸಾಧ್ಯ.

ಈಗ ಪ್ರತಿ ಲೀಟರ್ ನೀರಿಗೆ 0.5 ಮಿಲಿ ಲೀಟರ್ ಸ್ಟ್ರೆಪ್ಟೊಸೈಕ್ಲಿನ್ ದ್ರಾವಣ ಬಳಕೆ ಮಾಡಲಾಗುತ್ತಿದೆ. ಕಷಾಯ ಬಳಸಿದಲ್ಲಿ ಆ ಪ್ರಮಾಣವನ್ನು 0.25 ಮಿಲಿ ಲೀಟರ್‌ಗೆ ಕಡಿಮೆ ಮಾಡಬಹುದು. ಹಿತ್ತಲ ಗಿಡದ ಈ ಮದ್ದನ್ನು ಬೆಳೆಗಾರರು ಸುಲಭವಾಗಿ ಹಾಗೂ ಯಾವುದೇ ಖರ್ಚಿಲ್ಲದೇ ಬಳಸಬಹುದು’ ಎಂದು ಅವರು ಹೇಳುತ್ತಾರೆ. ಹೆಚ್ಚಿನ ಮಾಹಿತಿಗೆ: 94486–40881 ಇಲ್ಲಿಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.