ADVERTISEMENT

ಬೀಳಗಿ: ಸಚಿವರಿಂದ ಜನ ಸಂಪರ್ಕ ಸಭೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 6:55 IST
Last Updated 12 ಸೆಪ್ಟೆಂಬರ್ 2011, 6:55 IST

ಬೀಳಗಿ: ಸಚಿವ ಮುರುಗೇಶ ನಿರಾಣಿ ಭಾನುವಾರ ಪಟ್ಟಣದ ನೀಲಕಂಠೇಶ್ವರ ದೇವಾಲಯ, ಬೀರೇಶ್ವರ ದೇವಾಲಯ, ಮರಗಮ್ಮ ದೇವಾಲಯಗಳಲ್ಲಿ ಜನಸಂಪರ್ಕ ಸಭೆ ನಡೆಸಿದರು.

ಪಟ್ಟಣ ಪಂಚಾಯಿತಿಯ ಕಾರ್ಯವೈಖರಿಯ ಬಗ್ಗೆ, ಕಳಪೆ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರಿಂದ ಖುದ್ದಾಗಿ ತಾವೇ ಪರಿಶೀಲಿಸಲು ಬಂದಿದ್ದಾಗಿ ಸಚಿವರು ತಿಳಿಸಿದರು.

ಪಟ್ಟಣ ಪಂಚಾಯಿತಿ ನೀರು ಸರಬರಾಜು ಕಾರ್ಯದಲ್ಲಿ ವ್ಯತ್ಯಯ ಉಂಟಾಗಿದೆ. ಇದಕ್ಕಾಗಿ ಜಾಕ್‌ವೆಲ್‌ನಲ್ಲಿಯ ಹಳೆಯ ವಿದ್ಯುತ್ ಮೋಟಾರುಗಳನ್ನು ತಕ್ಷಣವೇ ಬದಲಾಯಿಸಿ, ಹೊಸ ವಿದ್ಯುತ್ ಮೋಟಾರ್‌ಗಳನ್ನು ಕೂಡಿಸಿ ನೀರಿನ ಪೂರೈಕೆ ಸಮರ್ಪಕವಾಗಿ ನಡೆಯುವಂತೆ ಅವರು ಸೂಚಿಸಿದರು.

ಮುಂದಿನ 25 ವರ್ಷಗಳ ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ರೂ.25ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯ  ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವು ಎಂದರು.

ರೂ.16ಕೋಟಿ ವೆಚ್ಚದಲ್ಲಿ ಪಟ್ಟಣದ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
 ಈಗಾಗಲೇ ಪಟ್ಟಣ ಪಂಚಾಯಿತಿಗೆ ಮಂಜೂರಾದ ರೂ.5ಕೋಟಿ ಹಣದಲ್ಲಿ ಪುರಸಭಾ ಭವನಕ್ಕೆ ರೂ.1.5ಕೋಟಿ, ನದಿಯಿಂದ ಪೈಪ್‌ಲೈನ್‌ಗಾಗಿ ರೂ.2.5ಕೋಟಿ, ಪಟ್ಟಣದಲ್ಲಿಯ ಹಳೇ ಬಾವಿಗಳ ಹೂಳೆತ್ತಲು ರೂ.1.5ಕೋಟಿ ತೆಗೆದಿರಿಸಲಾಗಿದೆ ಎಂದರು. 

 ಪಡಿತರ ಚೀಟಿಗಳ ಮನವಿಗಳ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಕೇವಲ ಒಂದು ತಿಂಗಳೊಳಗಾಗಿ ಹೊಸ ಪಡಿತರ ಚೀಟಿಗಳನ್ನು ವಿತರಿಸಿ ಹಳೆಯ ಚೀಟಿಗಳನ್ನು ಹಿಂಪಡೆಯಲಾಗುವದೆಂದು ಹೇಳಿದರು.

ಪಟ್ಟಣದ ಸಮಸ್ಯೆಗಳ ಕುರಿತು ನಾಗರಿಕರು ಪಟ್ಟಿ ಮಾಡಿಕೊಟ್ಟಲ್ಲಿ ಹಂತಹಂತವಾಗಿ ಅವುಗಳ ಪರಿಹಾರಕ್ಕಾಗಿ ಯತ್ನಿಸುವುದಾಗಿ ಭರವಸೆ ನೀಡಿದರಿ.

ತಹಸೀಲ್ದಾರ ಎಲ್.ಬಿ.ಕುಲಕರ್ಣಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಉಗ್ರಾಣ, ಸದಸ್ಯರಾದ ಅಜೀಜ ಭಾಯಿಸರ್‌ಕಾರ, ಮುತ್ತು ಮೋದಿ, ರೇಣುಕಾ ಬುಡ್ಡರ, ಅನಿಲ ದೇಶಪಾಂಡೆ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಆರ್.ನಿರಾಣಿ, ಎಸ್.ಎಂ.ಕಟಗೇರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.