ಮಹಾಲಿಂಗಪುರ: ಕನ್ನಡ ಸಾರಸ್ವತ ಲೋಕದ ಅಸ್ಮಿತತೆಯನ್ನು ಬಸವಾದಿ ಶರಣರು ಪ್ರಜ್ವಲಿಸುವಂತೆ ಮಾಡಿದ್ದಾರೆ. ವಚನ ಸಾಹಿತ್ಯವನ್ನು ಜೀವಂತವಾಗಿರಿಸಿದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಆಧುನಿಕ ಬಸವಣ್ಣ ಎಂದು ಹಾರೂಗೇರಿ ದರೂರ ಸಂಶೋಧನಾ ಕೇಂದ್ರದ ಸಂಯೋಜಕ ಡಾ.ವಿ.ಎಸ್.ಮಾಳಿ ಹೇಳಿದರು.
ಪಟ್ಟಣದ ಕೆಎಲ್ಇ ಸಂಸ್ಥೆಯ ಪದವಿ ಕಾಲೇಜಿನಲ್ಲಿ ಡಾ.ಪದ್ಮಾ ಅಂಗಡಿ ಸ್ಮರಣೆಯ ಡಾ.ಫ.ಗು.ಹಳಕಟ್ಟಿ ಜೀವನ ಸಾಧನೆ ಹಾಗೂ ಸಂಶೋಧನೆಗಳ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯಪುರದ ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್. ಮದಬಾವಿ ಮಾತನಾಡಿ, ‘ಹಳಕಟ್ಟಿಯವರು ಸಂಗ್ರಹಿಸಿದ ಬಸವಣ್ಣನ ವಚನಗಳು 18 ಭಾಷೆಗಳಲ್ಲಿ ಅನುವಾದಗೊಂಡಿವೆ, ಸರ್ಕಾರವು ₹ 1.5 ಕೋಟಿ ಅನುದಾನವನ್ನು ಹಳಕಟ್ಟಿ ಸಂಶೋಧನಾ ಕೇಂದ್ರಕ್ಕೆ ನೀಡಿದೆ. ಹಳಕಟ್ಟಿ ಧರೆಗೆ ಬಂದ ಅಪರೂಪದ ಶರಣ ಎಂದರು.
ಕನ್ನಡ ಭಾಷೆ ಬಗ್ಗೆ ಅವಹೇಳನಕಾರಿ ಮಾತು ಕೇಳಿ ಎಂಟು ಕನ್ನಡ ಶಾಲೆಗಳನ್ನು ವಿಜಯಪುರದಲ್ಲಿ ಪ್ರಾರಂಭಿಸಿದ್ದರು. ಅವರು ಕಟ್ಟಿದ ಬಿಎಲ್ಡಿಇ ಸಂಸ್ಥೆಯಲ್ಲಿ ಈಗ 40,000 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದು, 6 ಸಾವಿರ ಬೋಧಕರು ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಹೇಳಿದರು.
ಪ್ರಾಚಾರ್ಯ ಡಾ.ಬಿ.ಎಂ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಸ್.ಪಾವಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿ.ಎಸ್. ರಾಮತೀರ್ಥ, ಡಾ.ಶಣ್ಮುಖಪ್ಪ ಅಂಗಡಿ, ಶಿವಾನಂದ ದಾಸ್ಯಾಳ ಭಾಗವಹಿಸಿದ್ದರು, ಸಾಹಿತಿಗಳಾದ ಬಿ.ಪಿ.ಹಿರೇಸೋಮಣ್ಣವರ, ಸಿದ್ದು ದಿವಾನ, ಅಣ್ಣಾಜಿ ಪಡತಾರೆ, ಡಾ.ಸಂಗಮೇಶ ಕಲ್ಯಾಣಿ, ಸಿದ್ದು ಕಾಳಗಿ, ಡಾ. ಕೆ.ಎಂ. ಅವರಾದಿ, ಡಾ.ಸುನಂದಾ ಸೋರಗಾವಿ, ಡಾ. ಎಸ್.ಬಿ. ಬಿರಾದಾರ ಇದ್ದರು. ಡಾ.ಆಶಾರಾಣಿ ಚಿನಗುಂಡಿ ಸ್ವಾಗತಿಸಿದರು, ಡಾ. ಅಶೋಕ ನರೋಡೆ ನಿರೂಪಿಸಿದರು, ಶ್ರೇಯಾ ಮಠಪತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು ಹಾಗೂ ಶಂಕರ ಕೋಳಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.