ADVERTISEMENT

ವಾರ್ಡನ್ ವಜಾಕ್ಕೆ ಆಗ್ರಹ

ಹಾಸ್ಟೆಲ್ ವಿದ್ಯಾರ್ಥಿಗಳನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 9:58 IST
Last Updated 4 ಜುಲೈ 2013, 9:58 IST

ಬಾಗಲಕೋಟೆ:  ವಿದ್ಯಾರ್ಥಿಗಳನ್ನು ಸಲಿಂಗಕಾಮಕ್ಕೆ ಬಳಸಿಕೊಳ್ಳುತ್ತಿರುವ ನವನಗರದ ಸೆಕ್ಟರ್ ನಂ.46 ರಲ್ಲಿರುವ ಮೆಟ್ರಿಕ್ ಪೂರ್ವ ವಸತಿ ನಿಲಯ (ಬಿಸಿಎಂ) ಪಾಲಕನನ್ನು ತಕ್ಷಣ ವಜಾ ಮಾಡಬೇಕೆಂದು ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಜಿಲ್ಲಾ ರಾಷ್ಟ್ರೀಯ ವಿದ್ಯಾರ್ಥಿಗಳ  ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪನವರಿಗೆ ಮನವಿ ಸಲ್ಲಿಸಲಾಯಿತು.

ಮಂಗಳವಾರ ತಡರಾತ್ರಿ ನವನಗರದ ಸೆಕ್ಟರ್ ನಂ.46ರ ಮೆಟ್ರಿಕ್ ಪೂರ್ವ ವಸತಿ ನಿಲಯ (ಬಿಸಿಎಂ)ದ ಪಾಲಕ ಮಲ್ಲಿಕಾರ್ಜುನ ಇಮರಾಪೂರ ವಸತಿ ನಿಲಯದ ವಿದ್ಯಾರ್ಥಿಗಳನ್ನು ಸಲಿಂಗ ಕಾಮಕ್ಕೆ ಬಳಸಿಕೊಳ್ಳುತ್ತಿರುವುದನ್ನು ಖಂಡಿಸಿ ಹಾಗೂ ನಿಲಯ ಪಾಲಕನನ್ನು ಸೇವೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಯಾವುದೇ ಮುತುವರ್ಜಿ ವಹಿಸದೇ ಮಲ್ಲಿಕಾರ್ಜುನನ್ನು ವಜಾ ಮಾಡಿ ಲಿಖಿತವಾಗಿ ಆದೇಶ ಹೊರಡಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಎನ್‌ಎಸ್‌ಯುಐ ಉಪಾಧ್ಯಕ್ಷ ಶಿವುಕುಮಾರ ನಾಯ್ಕ, ವಿಠ್ಠಲ ವಾಗಾತಿ, ಬಸುರಾಜ ತಾಳಿಕೋಟಿ, ಲಕ್ಷ್ಮಣ ನಂದ್ಯಾಳ, ಜಗದೀಶ ಅಂಗಡಿ, ಶ್ರೀನಿವಾಸ ಮೆಸಾಳಿ, ಕೃಷ್ಣ ಬಂದವ್ವಗೋಳ, ಸಂಗಮೇಶ ಹಡಪದ, ಮಂಜುನಾಥ ಶಿಕ್ಕೇರಿ, ಮುತ್ತುರಾಜ ಅಂಗಡಿ, ಶಿವಾನಂದ ಶಿಕ್ಕೇರಿ, ಮುತ್ತು ಅಂಗಡಿ, ಸಂಗಮೇಶ ಹಂಡರಗಲ್, ನಾಗರಾಜ್ ಕೋರಿ ಮತ್ತಿತರರು ಭಾಗವಹಿಸಿದ್ದರು.

ಥಳಿತ: ನವನಗರದ ಸೆಕ್ಟರ್ ನಂ.46 ರಲ್ಲಿ ರುವ ಮೆಟ್ರಿಕ್ ಪೂರ್ವ ಹಾಸ್ಟೇಲ್ ವಾರ್ಡನ್ ಮಲ್ಲಿಕಾರ್ಜುನ ಬಸಪ್ಪ ಇಮ್ರೋಪುರ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡಿರುವುದಕ್ಕೆ ಬೇಸತ್ತ ವಿದ್ಯಾರ್ಥಿಗಳು ಹಾಗೂ ಸುದ್ದಿ ತಿಳಿದ ಸಾರ್ವಜನಿಕರು ವಾರ್ಡನ್‌ನನ್ನು ಥಳಿಸಿದ ಘಟನೆ ಮಂಗಳವಾರ ತಡರಾತ್ರಿ ನಡೆಯಿತು.

ಅಮಾನತು
ಬಾಗಲಕೋಟೆ:
ಬಾಗಲಕೋಟೆ ನಗರದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪದ ಮೇಲೆ ನಿಲಯ ಮೇಲ್ವಿಚಾರಕ ಮಲ್ಲಿಕಾರ್ಜುನ ಇಮ್ರೋಪೂರ ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಆಯುಕ್ತ ಆರ್. ಶಾಂತರಾಜ್ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆಂದು ಜಿಲ್ಲಾ ಪಂಚಾಯ್ತಿ ಸಿ.ಇ.ಒ ಎಸ್.ಜಿ.ಪಾಟೀಲ ತಿಳಿಸಿದ್ದಾರೆ.

ವಿದ್ಯಾರ್ಥಿಗಳೇ ಆರೋಪಿಸಿದ್ದರಿಂದ ಮೇಲ್ವಿಚಾರಕರ ಅಸಭ್ಯತೆ, ದುರ್ನಡತೆ ಹಾಗೂ ಅಶಿಸ್ತು ಕಾರಣಗಳ ಮೇಲೆ ಕರ್ನಾಟಕ ನಾಗರಿಕ ಸೇವೆ ನಿಯಮಗಳ 1957 ರ ಪ್ರಕಾರ ವಿಚಾರಣೆ ಕಾಯ್ದಿರಿಸಿ ಆಯುಕ್ತರು ಇಂದು ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.