ADVERTISEMENT

ಸಂಗೀತ ಸಾಹಿತ್ಯದಲ್ಲಿ ಸಂಭ್ರಸಿದ ಜನತೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 7:15 IST
Last Updated 9 ಅಕ್ಟೋಬರ್ 2011, 7:15 IST

ಬಾದಾಮಿ: ಐತಿಹಾಸಿಕ, ಸಾಂಸ್ಕೃತಿಕ ನಗರಿಯ ವಿಶ್ವಚೇತನ ಸಂಘದ  ಬಯಲು ರಂಗಮಂದಿರದಲ್ಲಿ ಈಚೆಗೆ ನಡೆದ ಜಾನಪದ ಹಾಗೂ ಸಂಗೀತ ಉತ್ಸವ, ಸಾಹಿತ್ಯ ಕಾರ್ಯಕ್ರಮ ಜನರ ಮನ ತಣಿಸಿತು.

ಮೊದಲ ದಿನ  ನಡೆದ ಜಾನಪದ ಸಂಸ್ಕೃತಿ ಉತ್ಸವದಲ್ಲಿ ಅಮರಾವತಿಯ ಹನಮಪ್ಪ ಭಜಂತ್ರಿ  ಶಹನಾಯ್ ವಾದನ ಪ್ರಸ್ತುತಪಡಿಸಿ ಗಮನ ಸೆಳೆದರು. ಇದರ ಬೆನ್ನಲ್ಲೇ ಬಿ.ಎಂ.ಬುದ್ನಿ ಗ್ರಾಮದ ಸತ್ಯವ್ವ ತಳಗೇರಿ ಮತ್ತು ಸಂಗಡಿಗರು ಹಾಡಿದ ಗೀಗಿ ಪದ ಹಾಗೂ ರನ್ನ ಬೆಳಗಲಿ ಗ್ರಾಮದ ಲಕ್ಕಪ್ಪ ಭಜಂತ್ರಿ ಮತ್ತು ಸಂಗಡಿಗರು ಪ್ರಸ್ತುತಪಡಿಸಿದ ಹಲಗೆ ಮೇಳ , ಜನರು ತಲೆದೂಗುವಂತೆ ಮಾಡಿತು. ಎರಡನೆಯ ದಿನ ಬೆಂಗಳೂರಿನ ಅನಂತರವಿ ಸುಗಮ ಸಂಗೀತ ತಂಡದ ರವಿ ಮೂರೂರ, ಶಿಶುನಾಳ ಶರೀಫರ ತತ್ವಪದಗಳು ಹಾಗೂ ನಾಡಿನ ಹಿರಿಯ ಕವಿಗಳ ಭಾವಗೀತೆಗಳನ್ನು ಪ್ರಸ್ತುತಪಡಿಸಿ ಸಂಗೀತಪ್ರಿಯರ ಹೃದಯ ಕದ್ದರು. ರಾಷ್ಟ್ರಕವಿ ಕುವೆಂಪು, ಜಿ.ಎಸ್.ಶಿವರುದ್ರಪ್ಪ, ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ ಹಾಗೂ ಜಿ.ಪಿ.ರಾಜರತ್ನಂ ಅವರ ಕವಿತೆಗಳು ಅಲ್ಲಿ ಜೀವ ಪಡೆದುಕೊಂಡವು. ನಿಸಾರ್ ಅಹ್ಮದ್ ಅವರ `ಕುರಿಗಳು ಸಾರ್~ ಹಾಡಿಗೆ ಸಭಿಕರು ನಿರಂತರ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.

ಮೂರನೇ ದಿನ ಸಾಹಿತ್ಯದ ಸಿಂಚನ ನಡೆದಿತ್ತು. ಚಿಂತಕ ಡಾ.ರಹಮತ್ ತರೀಕೆರೆ, ವಿಶ್ವ ಪ್ರವಾಸದ  `ಕಥನ~ ಹೇಳುತ್ತ ಗ್ರಾಮೀಣ ಸಂಸ್ಕೃತಿಯ ಸಿರಿವಂತಿಕೆಯ ಅಧ್ಯಯನ ಅವಶ್ಯ ಎಂದರು.

ಡಾ.ಬಸವರಾಜ ಜಗಜಂಪಿ ಮತನಾಡಿ, ಸಂಪತ್ತಿನ ಸಂಗ್ರಹ ದಿಂದ ಮಾನಸಿಕ ನೆಮ್ಮದಿ ಸಿಗುವುದಿಲ್ಲ ಎಂದು ಹೇಳಿ ಬಸವಣ್ಣ, ಆಯ್ದಕ್ಕಿ ಲಕ್ಕಮ್ಮ ಹಾಗೂ ಪುರಂದರದಾಸರು ಮುಂತಾದವರು ವ್ಯಾಖ್ಯಾನಿಸಿದ ಸಂಪತ್ತಿನ ಕುರಿತು ವಿವರಿಸಿದರು.

ವಿಶ್ವ ಚೇತನ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.