ADVERTISEMENT

ಹಸಿರು ನಗರ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 7:35 IST
Last Updated 15 ಅಕ್ಟೋಬರ್ 2012, 7:35 IST

ಜಮಖಂಡಿ: ಪರಿಸರ ಸಂರಕ್ಷಣೆಗೆ ಒಟ್ಟು ಭೂಪ್ರದೇಶದ ಶೇ.33 ರಷ್ಟು ಅರಣ್ಯ ಪ್ರದೇಶ ಇರಬೇಕು. ಹಾಗಾಗಿ ಪರಿಸರ ಸಂರಕ್ಷಣೆಗಾಗಿ ಸಂಪನ್ಮೂಲಗಳ ಮಿತ ಬಳಕೆ, ಮರು ಬಳಕೆಯ ಮೂಲಕ ಸರಳ ಜೀವನ ಅಳವಡಿಸಿಕೊಳ್ಳಬೇಕಾದ ತೀವ್ರ ಅಗತ್ಯವಿದೆ ಎಂದು ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಜಗದೀಶ ಗುಡಗುಂಟಿ ಹೇಳಿದರು.

ಇಲ್ಲಿನ ರಾಮತೀರ್ಥ ನಗೆಕೂಟಗಳ ಒಕ್ಕೂಟದ ಆಶ್ರಯದಲ್ಲಿ ಹಾಗೂ ಜಗದೀಶ ಗುಡಗುಂಟಿ ಅವರ ಆರ್ಥಿಕ ನೆರವಿನಲ್ಲಿ ಹಮ್ಮಿಕೊಳ್ಳಲಾಗಿರುವ `ಹಸಿರು ನಗರ~ ಕಾರ್ಯಕ್ರಮಕ್ಕೆ ಪ್ರೊಫೆಸರ್ಸ್‌ ಕಾಲೊನಿಯ ನಗರಸಭೆ ಉದ್ಯಾನವನದಲ್ಲಿ ಸಸಿನೆಟ್ಟು ಚಾಲನೆ ನೀಡಿದರು.

ಹಸಿರು ನಗರ ಕಾರ್ಯಕ್ರಮದ ಅಡಿಯಲ್ಲಿ ನಗರದಾದ್ಯಂತ ಲಭ್ಯವಿರುವ ಖಾಲಿ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಸ್ಥಳೀಕರಿಗೆ ಸಸಿಗಳ ಪಾಲನೆ ಪೋಷಣೆಯ ಜವಾಬ್ದಾರಿ ನೀಡಲಾಗುವುದು. ಈ ಕಾರ್ಯಕ್ರಮದ ಮೊದಲ ಹಂತದಲ್ಲಿ ಒಂದು ಸಾವಿರ ಸಸಿಗಳನ್ನು ನೆಡಲಾಗುವುದು ಎಂದರು.

ರೋಟರಿ ಮಾಜಿ ಗವರ್ನರ್ ಡಾ. ಗಿರೀಶ ಉದಪುಡಿ, ಜಿ.ಪಂ.ಮಾಜಿ ಸದಸ್ಯ ದೇವಲ ದೇಸಾಯಿ, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ನಾಗಪ್ಪ ಸನದಿ, ನಗರಸಭೆ ಸದಸ್ಯೆ ವಿಜಯಲಕ್ಷ್ಮೀ ಉಕಮನಾಳ, ವಕೀಲ ಎನ್.ಎಸ್. ದೇವರವರ, ಮಲ್ಲಿಕಾರ್ಜುನ ಕಲ್ಲೊಳ್ಳಿ, ವೈ.ಟಿ. ಗಿರಡ್ಡಿ, ಎಲ್.ವಿ. ಸಕನಾದಗಿ, ಸಿ.ಎಸ್.ಝಳಕಿ, ಪ್ರೊ.ಎಸ್.ಪಿ. ಝುಂಜರವಾಡ ಪಾಲ್ಗೊಂಡಿದ್ದರು.

ನಗೆಕೂಟಗಳ ಒಕ್ಕೂಟದ ಅಧ್ಯಕ್ಷ ಎಸ್.ಎಸ್.ನ್ಯಾಮಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಬಿ.ಎ.ಹುದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಮಮದಾಪುರ ನಿರೂಪಿಸಿದರು. `ಹಸಿರು ನಗರ ಕಾರ್ಯಕ್ರಮ ರೂವಾರಿ ಜಗದೀಶ ಗುಡಗುಂಟಿ ಅವರನ್ನು ನಗೆಕೂಟಗಳ ಒಕ್ಕೂಟದ ಪರವಾಗಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.