ರಬಕವಿ ಬನಹಟ್ಟಿ: ನಗರದ ನಿವಾಸಿ ಅಭಿಲಾಷ ಬಡ್ಡೂರ ಮಂಗಳವಾರ ಫಲಿತಾಂಶ ಪ್ರಕಟವಾದ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 591 ನೇ ಸ್ಥಾನ ಪಡೆದಿದ್ದಾರೆ.
ರೇಷ್ಮೆ ಇಲಾಖೆ ನಿವೃತ್ತ ನೌಕರ ಶಶಿಕಾಂತ ಬಡ್ಡೂರ ಹಾಗೂ ಸುಲೋಚನಾ ದಂಪತಿ ಪುತ್ರ ಅಭಿಲಾಷರಾಯಬಾಗದ ಮಹಾವೀರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದ್ದಾರೆ. ಧಾರವಾಡದ ಜೆಎಸ್ಎಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದು, ಬೆಂಗಳೂರಿನ ಡಾ.ಅಂಬೇಡ್ಕರ್ ಎಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅಲ್ಲಿಯೂ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ನಂತರ ಟಿಸಿಎಸ್ ಸಂಸ್ಥೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು.
ಎರಡನೇ ಬಾರಿಗೆ ಯಶಸ್ಸು: 2016 ರಿಂದಲೇ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಮೊದಲ ಯತ್ನದಲ್ಲಿ ಅವರು ವಿಫಲಗೊಂಡಿದ್ದರು. 2017ರಲ್ಲಿ ಎರಡನೇ ಬಾರಿಗೆ ಪರೀಕ್ಷೆ ಬರೆದರು. ಆಗ ಸಾಮಾನ್ಯ ವಿಭಾಗದಲ್ಲಿ ದೇಶಕ್ಕೆ 531 ನೇ ಸ್ಥಾನ ಪಡೆದು ಭಾರತೀಯ ಅಂಚೆ ಸೇವೆಗೆ ಆಯ್ಕೆಯಾಗಿದ್ದರು. ಸದ್ಯಬೆಂಗಳೂರಿನಲ್ಲಿ ಪೋಸ್ಟಲ್ ಮತ್ತು ಟೆಲಿಕಮ್ಯುನಿಕೇಶನ್ ವಿಭಾಗದಲ್ಲಿ ವ್ಯವಸ್ಥಾಪಕರಾಗಿ ತರಬೇತಿ ಪಡೆಯುತ್ತಿದ್ದಾರೆ.
ಮೊದಲಿನಿಂದಲೂ ಐಎಎಸ್ ಅಧಿಕಾರಿಯಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಬೇಕು ಎಂಬ ಆಶಯ ಹೊಂದಿದ್ದ ಕಾರಣ ಫಲಿತಾಂಶ ಇನ್ನಷ್ಟು ಸುಧಾರಿಸಿಕೊಳ್ಳಲು ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಲೇ 2019ರಲ್ಲಿ ಮತ್ತೆ ಯುಪಿಎಸ್ಸಿ ಪರೀಕ್ಷೆ ಬರೆದರು. ಈ ಬಾರಿ ಅವರು ಓಬಿಸಿ ವಿಭಾಗದಲ್ಲಿ ರಾಷ್ಟ್ರಕ್ಕೆ 591 ಸ್ಥಾನ ಪಡೆದಿದ್ದಾರೆ.
ಈ ಬಗ್ಗೆ ’ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಈಗ ಓಬಿಸಿ ವಿಭಾಗದಲ್ಲಿ 591 ಸ್ಥಾನ ಲಭಿಸಿದೆ. ಐಪಿಎಸ್ ಇಲ್ಲವೆ ಐಆರ್ಎಸ್ ಹುದ್ದೆ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.