ADVERTISEMENT

ಬಾದಾಮಿ: ಸಮಗ್ರ ಬೇಸಾಯ, ಉತ್ತಮ ಆದಾಯ

ಇಳಿ ವಯಸ್ಸಿನಲ್ಲಿಯೂ ಕೃಷಿ ಕಾರ್ಯದಲ್ಲಿ ತೊಡಗಿರುವ ರೈತ ಸದಾಶಿವನಗೌಡ

ಎಸ್.ಎಂ.ಹಿರೇಮಠ
Published 29 ಮಾರ್ಚ್ 2024, 4:55 IST
Last Updated 29 ಮಾರ್ಚ್ 2024, 4:55 IST
ಬಾದಾಮಿ ಸಮೀಪದ ಹಿರೇಮುಚ್ಚಳಗುಡ್ಡ ಗ್ರಾಮದ ರೈತ ಸದಾಶಿವಗೌಡ ಗೌಡರ ತಮ್ಮ ಹೊಲದಲ್ಲಿನ ದ್ರಾಕ್ಷಿ ಬೆಳೆಯೊಂದಿಗೆ
ಬಾದಾಮಿ ಸಮೀಪದ ಹಿರೇಮುಚ್ಚಳಗುಡ್ಡ ಗ್ರಾಮದ ರೈತ ಸದಾಶಿವಗೌಡ ಗೌಡರ ತಮ್ಮ ಹೊಲದಲ್ಲಿನ ದ್ರಾಕ್ಷಿ ಬೆಳೆಯೊಂದಿಗೆ   

ಬಾದಾಮಿ: ನಾಲ್ಕು ದಶಕಗಳ ಹಿಂದೆ ಗಟ್ಟಿಗೆಂಪು ಮಸಾರಿಯ ಖುಷ್ಕಿ ಜಮೀನಿನಲ್ಲಿ ಮಳೆಯಾಶ್ರಿತದಲ್ಲಿ ಜೋಳ, ಸಜ್ಜೆ ,ಶೇಂಗಾ ಮತ್ತು ತೊಗರಿ ಬೆಳೆ ಬೆಳೆದು ಬಂದಷ್ಟರಲ್ಲಿಯೇ ತೃಪ್ತಿ ಪಡೆದು ಕುಟುಂಬ ನಿರ್ವಹಿಸುತ್ತಿದ್ದ ಹಿರೇಮುಚ್ಚಳಗುಡ್ಡ ಗ್ರಾಮದ ವೃದ್ಧ ರೈತ ಸದಾಶಿವಗೌಡ ಗೌಡರ,  ಈಗ ಮಕ್ಕಳ ಸಹಾಯದಿಂದ ಹೊಲದಲ್ಲಿ ಕೊಳವೆಬಾವಿ ಕೊರೆಯಿಸಿ ನೀರಾವರಿ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಿದ್ದಾರೆ.

9 ಎಕರೆ ಗಟ್ಟಿಯಾದ ಕೆಂಪು ಜಮೀನಿನಲ್ಲಿ ಸಾವಯವ ಕೃಷಿ ಮೂಲಕ ವೈವಿಧ್ಯಮಯ ಬೆಳೆ ಬೆಳೆಯುತ್ತಿದ್ದಾರೆ. ಕೊಳವೆಬಾವಿಯಲ್ಲಿ ನೀರು ಅಧಿಕವಾಗಿದ್ದರೂ,ನೀರು ಮತ್ತು ಸಮಯ ಉಳಿಸಲು ಹನಿ ನೀರಾವರಿ ಕೈಗೊಂಡಿದ್ದಾರೆ. 

ಸಮಗ್ರ ಬೇಸಾಯದಲ್ಲಿ ಐದು ಎಕರೆ ಕಬ್ಬು, ಎರಡು ಎಕರೆ ದ್ರಾಕ್ಷಿ, ಎರಡು ಎಕರೆದಲ್ಲಿ ಮೆಕ್ಕೆಜೋಳ, ಶೇಂಗಾ ಮತ್ತು ಕಲ್ಲಗಂಡಿ ಕಲ್ಲಂಗಡಿ ಬೆಳೆ ಪಡೆಯುತ್ತಿದ್ದಾರೆ.ಕಬ್ಬು ಎಕರೆಗೆ 86 ಟನ್ ಬೆಳೆದಿದ್ದಾರೆ. ಮೆಕ್ಕೆ ಜೋಳ, ಕಲ್ಲಂಗಡಿ ಮತ್ತು ಶೇಂಗಾ ಬೆಳೆಯಲ್ಲಿಯೂ ಉತ್ತಮ ಇಳುವರಿ ಪಡೆದಿದ್ದಾರೆ. ಈ ಬಾರಿ ದ್ರಾಕ್ಷಿ   ಬೆಳೆದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ಅದರಲ್ಲೂ ಯಶಸ್ಸು ಕಂಡಿದ್ದಾರೆ.

ADVERTISEMENT

‘ ಎರಡು ಎಕರೆ ಪ್ರದೇಶದಲ್ಲಿ 2022ರಲ್ಲಿ 1600 ಡಾಗರೇಜ್ (ಕಾಡು ಸಸಿ) ಗೆ 1600 ಮಾಣಿಕ ಚಮನ್ ತಳಿಯ ದ್ರಾಕ್ಷಿ ಅಗಿ ಕ್ರಾಸಿಂಗ್ ಮಾಡಿದ್ದೆ, 2024 ಫೆಬ್ರುವರಿಯಲ್ಲಿ ಮೊದಲ ಬಾರಿಗೆ ಹಣ್ಣನ್ನು ಕಟಾವು ಮಾಡಿ ಮಾರಲು ಆರಂಭಿಸಿದೆ’ ಎನ್ನುತ್ತಾರೆ 65ವಯಸ್ಸಿನ ರೈತ ಸದಾಶಿವಗೌಡ.

‘ಹಣ್ಣನ್ನು ಮಾರುಕಟ್ಟೆಗೆ ಕೊಂಡೊಯ್ಯದೆ, ನೇರವಾಗಿ ಜನರಿಗೆ ತಲುಪಿಸಲು ಗ್ರಾಮದ ರಸ್ತೆಯ ಪಕ್ಕದಲ್ಲಿ ಮತ್ತು ಬಾದಾಮಿ ಪಟ್ಟಣದಲ್ಲಿ ನಿತ್ಯ 30 ರಿಂದ 40 ಪೆಟ್ಟಿಗೆ ಮಾರಾಟ ಮಾಡಿದೆ. ನಿತ್ಯ ಅಂದಾಜು ₹30 ಸಾವಿರ ಸಂಗ್ರಹವಾಗುತ್ತಿತ್ತು. ಒಟ್ಟು ₹ 6 ಲಕ್ಷ ಆದಾಯವಾಗಿದೆ’ ಎಂದು ತಿಳಿಸಿದರು.

‘ಕಲ್ಲಿನ ಕಂಬ, ಕಬ್ಬಿಣ  ಪಟ್ಟಿ, ತಂತಿ, ಕಾರ್ಮಿಕರಿಗೆ ಸಂಬಳ, ಜಾನುವಾರು ಸಾವಯವ ಗೊಬ್ಬರ, ಔಷಧಿ ಸೇರಿ ಎಕರೆಗೆ ಅಂದಾಜು ₹ 6 ಲಕ್ಷ ವೆಚ್ಚವಾಗಿದೆ. ದ್ರಾಕ್ಷಿ ಬೆಳೆಯನ್ನು 15 ರಿಂದ 20 ವರ್ಷ ಫಸಲು ಪಡೆಯಬಹುದು. ಮೊದಲ ವರ್ಷ ಇಳುವರಿ ಕಡಿಮೆ ಬರುತ್ತದೆ, ವರ್ಷಗಳು ಗತಿಸಿಸಿದಂತೆ   ಹೆಚ್ಚಿನ ಇಳಿವರಿ ಪಡೆಯಬಹುದು’ ಎಂದರು.

ಪುತ್ರರಾದ ಫಕೀರಗೌಡ ಮತ್ತು ಶಂಕರಗೌಡ ಸರ್ಕಾರಿ ನೌಕರಿಯಲ್ಲಿದ್ದಾರೆ. ರಜೆ ಸಮಯದಲ್ಲಿ ಮಕ್ಕಳು ಮತ್ತು ದಿನ ಪತ್ನಿ ಶಾಂತಮ್ಮ ಕೃಷಿಗೆ ನೆರವಾಗುತ್ತಾರೆ ಎನ್ನುತ್ತಾರೆ ಅವರು.

ಬೇಸಿಗೆಯಲ್ಲಿ ಗ್ರಾಹಕರು ದ್ರಾಕ್ಷಿ ಹಣ್ಣು ಸವಿಯಲು ಕಂದು ಬಣ್ಣದ ಸಿಹಿಯಾದ ‘ ಮಾಣಿಕ್ ಚಮನ್ ’ ದ್ರಾಕ್ಷಿ ಮಾರಾಟಕ್ಕೆ ಸಜ್ಜಾಗಿರುವುದು.
ರಾಸಾಯನಿಕ ಗೊಬ್ಬರಕ್ಕಿಂತ ಸಾವಯವ ಗೊಬ್ಬರ ಬಳಿಸಿದರೆ ಭೂಮಿ ಫಲವತ್ತಾಗುವುದು. ಶ್ರಮ ಪಟ್ಟರೆ ಭೂತಾಯಿ ಎಂದೂ ಕೈಬಿಡೋದಿಲ್ಲ.
-ಸದಾಶಿವಗೌಡ ಗೌಡರ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.