
ಜಮಖಂಡಿ: ‘ರೈತರು ಆರ್ಥಿಕವಾಗಿ ಸದೃಢರಾಗಲು ಸಾಕಿರುವ ಜಾನುವಾರುಗಳಿಗೆ ಕಾಲುಬಾಯಿಯಂಥಹ ಅನೇಕ ರೋಗಗಳು ಪೀಡಿಸುತ್ತಿದ್ದು, ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ, ರೋಗದ ನಿಯಂತ್ರಣಕ್ಕೆ ಅಭಿಯಾನ ನಡೆಸಲಾಗುತ್ತಿದ್ದು ಪ್ರತಿಯೊಬ್ಬ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು’ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ಶಾಸಕರ ಗೃಹ ಕಚೇರಿಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಕಾಲುಬಾಯಿ ರೋಗ ನಿಯಂತ್ರಣವು ದೇಶದ ಪಶುಸಂಗೋಪನಾ ಕ್ಷೇತ್ರಕ್ಕೆ ಮಹತ್ವದ ಹೆಜ್ಜೆಯಾಗಿದೆ. 140 ಕೋಟಿ ಜನಸಂಖ್ಯೆಯ ಭಾರತದಲ್ಲಿ ಹಾಲು ಉತ್ಪಾದನೆ ಮತ್ತು ಪಶುಪಾಲನೆ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದರು.
ಪಶುವೈದ್ಯಾಧಿಕಾರಿ ಡಾ. ಪ್ರಕಾಶ ಗುಳಪ್ಪಗೋಳ ಮಾತನಾಡಿ, ಕಾಲುಬಾಯಿ ರೋಗವು ಎತ್ತು, ಹೋರಿ, ಹಸು, ಎಮ್ಮೆ ಹಾಗೂ ಹಂದಿಗಳಲ್ಲಿ ವ್ಯಾಪಕ ಹಾನಿ ಉಂಟುಮಾಡುತ್ತದೆ. ಹಾಲಿನ ಇಳುವರಿ ಕಡಿಮೆಯಾಗುವುದು, ಗರ್ಭಕಟ್ಟುವಿಕೆಯಲ್ಲಿ ವಿಳಂಬ ಮತ್ತು ಸಾಮರ್ಥ್ಯ ನಷ್ಟ ಸಂಭವಿಸುತ್ತದೆ. ಆದ್ದರಿಂದ ಮೂರು ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕುವುದು ಅತ್ಯಗತ್ಯ’ ಎಂದು ತಿಳಿಸಿದರು.
ಪಶುವೈದ್ಯ ಡಾ.ಚನ್ನಪ್ಪ ನಿಂಬಾಳ, ಎಸ್ ಡಿ ಬಟಕುರ್ಕಿ, ಶಶಿಕಲಾ ಮೇತ್ರಿ ಆದಿತ್ಯ ತಳವಾರ ಆನಂದ ಭೂಷಣ್ಣವರ ಇದ್ದರು.
ಕಾಲುಬಾಯಿ ರೋಗದಿಂದ ಪೂರ್ಣ ರಕ್ಷಣೆಗೆ ಎಂಟನೇ ಸುತ್ತಿನ ಲಸಿಕೆ ಹಾಕುವ ಅವಧಿ ನವೆಂಬರ್ 3ರಿಂದ ಡಿಸೆಂಬರ್ 2 ರವರೆಗೆ ನಿಗದಿಯಾಗಿದೆ. ತುರ್ತು ಪಶುವೈದ್ಯಕೀಯ ಚಿಕಿತ್ಸೆಗೆ ಸಹಾಯವಾಣಿ 1962ನ್ನು ಸಂಪರ್ಕಿಸಬಹುದುಡಾ. ಪ್ರಕಾಶ ಗುಳಪ್ಪಗೋಳ ಪಶುವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.