
ರಬಕವಿ ಬನಹಟ್ಟಿ: ‘ಮತಾಂತರ ಬಹುದೊಡ್ಡ ಪಿಡುಗು ಆಗಿದ್ದು, ಈ ಕುರಿತು ಹಿಂದೂಗಳಲ್ಲಿ ಜಾಗೃತಿ ಮೂಡಿಸಬೇಕಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಪ್ರಚಾರ ಪ್ರಮುಖ ಅರುಣಕುಮಾರ ತಿಳಿಸಿದರು.
ಇಲ್ಲಿನ ಕಾಡಸಿದ್ಧೆಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದರು.
‘ಹಿಂದೂಗಳಲ್ಲಿ ಅಪಾರ ಶಕ್ತಿ ಅಡಗಿದೆ. ಅವರು ಯಾರನ್ನೂ ದ್ವೇಷಿಸುವುದಿಲ್ಲ. ಪ್ರೀತಿಯೇ ಅವರ ಅಸ್ತ್ರವಾಗಿದೆ. ಆದರೆ, ಜಾತೀಯತೆ ಹಿಂದೂಗಳ ದೊಡ್ಡ ಸಮಸ್ಯೆಯಾಗಿದ್ದು, ಹಿಂದೂಗಳಾಗಿ ಮುಂದುವರಿದರೆ ಮಾತ್ರ ಉತ್ತಮ ಭವಿಷ್ಯವಿದೆ’ ಎಂದರು.
‘ನಮ್ಮ ಮನೆ, ಸುತ್ತಲಿನ ಪರಿಸರವನ್ನು ಹಸಿರಾಗಿಸುವುದರ ಜೊತೆಗೆ ದೇಶವನ್ನೂ ಹಸಿರಾಗಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ವಿಷಮುಕ್ತ ಆಹಾರದಿಂದ ದೂರವಾಗಿ ಉತ್ತಮ ಆರೋಗ್ಯ ಗಳಿಸಬೇಕಿದೆ. ಲವ್ ಜಿಹಾದ್ ವಿರುದ್ಧ ಎಲ್ಲರೂ ಹೋರಾಡಬೇಕು’ ಎಂದು ತಿಳಿಸಿದರು.
ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ಅಧ್ಯಕ್ಷ ಶ್ರೀಶೈಲ ಗೊಂಬಿ ಮಾತನಾಡಿ, ‘ಆರ್ಎಸ್ಎಸ್ಗೆ 100 ವರ್ಷ ತುಂಬಿರುವ ಸಮಯದಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳು ಅಗತ್ಯವಾಗಿವೆ. ಹಿಂದೂಗಳೆಲ್ಲರೂ ಒಗ್ಗಟ್ಟು ಇಮ್ಮಡಿಗೊಳಿಸಬೇಕು’ ಎಂದರು.
ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಹಿಳಾ ಪ್ರತಿನಿಧಿ ಸಾವಿತ್ರ ಕಾಡದೇವರ, ಶಾಸಕ ಸಿದ್ದು ಸವದಿ, ಬ್ರಿಜ್ಮೋಹನ ಚಿಂಡಕ, ಶಂಕರ ವಸ್ತ್ರದ, ಗಿರೀಶ ಕಾಡದೇವರ, ಮೋಹನ ಪತ್ತಾರ, ಶಿವಾನಂದ ಗಾಯಕವಾಡ, ಸದಾಶಿವ ತಟಕೋಟ, ಮಹಾಲಿಂಗ ಬಾಗಲಕೋಟ, ಶಿವು ಗುಂಡಿ, ಬಸವರಾಜ ತೆಗ್ಗಿ, ಜಿ.ಎಸ್.ಗೊಂಬಿ, ಮನೋಹರ ಶಿರೋಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.