ಬಾದಾಮಿ: ನಿರಂತರ ವಾರ ಸುರಿದ ಮಳೆಯಿಂದ ಪಟ್ಟಣದ ಸಿಸಿ ರಸ್ತೆಗಳೆಲ್ಲ ಗುಂಡಿಮಯವಾಗಿವೆ. ಗುಂಡಿಯಲ್ಲಿ ರಸ್ತೆಯೊ ಇಲ್ಲವೇ ರಸ್ತೆಯಲ್ಲಿ ಗುಂಡಿಯೋ ಎನ್ನುವಂತಾಗಿದೆ. ದ್ವಿಚಕ್ರ, ಆಟೊ ಚಾಲಕರು ಮತ್ತು ಪಾದಚಾರಿಗಳು ಪರದಾಡುವಂತಾಗಿದೆ.
‘ಮುಖ್ಯ ಮಾರುಕಟ್ಟೆಯ ಸುಂಕದ ಆಂಜನೇಯ ದೇವಾಲಯ ರಸ್ತೆ, ಮ್ಯೂಜಿಯಂ ರಸ್ತೆ, ದೊಡ್ಡ ಮಾರುತಿ ದೇವಾಲಯ ರಸ್ತೆ, ಚಾಲುಕ್ಯ ನಗರ, ವಿದ್ಯಾನಗರ, ಅನಂದ ನಗರ ಸಿಸಿ ರಸ್ತೆಗಳು ಮಳೆಯಿಂದ ಗುಂಡಿಮಯವಾಗಿವೆ. ವಾಹನ ಚಾಲಕರು ಗುಂಡಿಗಳನ್ನು ತಪ್ಪಿಸಲು ಹರಸಾಹಸ ಮಾಡಬೇಕಿದೆ.
‘ಮೂರ್ನಾಲ್ಕು ವರ್ಷಗಳಿಂದ ರಸ್ತೆ ಹದಗೆಟ್ಟಿವೆ. ವಾರ್ಡಿನ ಪುರಸಭೆ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ತಿಳಿಸಿದರೂ ಸಹ ರಸ್ತೆ ದುರಸ್ತಿ ಕಾರ್ಯವನ್ನು ಮಾಡಿಸುತ್ತಿಲ್ಲ. ರಸ್ತೆ ಗುಂಡಿಗಳಿಂದ ಅನೇಕ ದ್ವಿಚಕ್ರ ವಾಹನ ಸವಾರರ ಅಪಘಾತಗಳು ಸಂಭವಿಸಿವೆ. ಸಿಸಿ ರಸ್ತೆ ಬೇಗ ದುರಸ್ತಿ ಮಾಡಿಸಿ ’ ಎಂದು ವಿದ್ಯಾನಗರದ ರಮೇಶ ಪಾಟೀಲ ಪುರಸಭೆಗೆ ಒತ್ತಾಯಿಸಿದ್ದಾರೆ.
‘2023-24ರಲ್ಲಿ ಸಿಸಿ ರಸ್ತೆ ದುರಸ್ತಿಗೆ ಅನುದಾನ ಕೊಡುತ್ತೇವೆ ಎಂದು ಹೇಳಿದ್ದರು ಕೊಡಲಿಲ್ಲ. ಪುರಸಭೆ ಮುಂದೆ ಸದಸ್ಯರು ಧರಣಿ ನಡೆಸಿದರೂ 2024-25 ಸಾಲಿನ 15ನೇ ಹಣಕಾಸಿನಲ್ಲಿಯೂ ಮಂಜೂರ ಮಾಡಲಿಲ್ಲ. ಸಿಸಿ ರಸ್ತೆಗಳೆಲ್ಲ ಗುಂಡಿಮಯವಾಗಿವೆ’ ಎಂದು 8ನೇ ವಾರ್ಡಿನ ಸದಸ್ಯ ಅಶೋಕ ಯಲಿಗಾರ ಹೇಳಿದರು.
‘ಪುರಸಭೆ ವಿಶೇಷ ಅನುದಾನದಲ್ಲಿ ₹ 2.95 ಕೋಟಿ ವೆಚ್ಚದಲ್ಲಿ ವಿವಿಧ ವಾರ್ಡ್ಗಳಲ್ಲಿ ಸಿಸಿ ರಸ್ತೆ, ಚರಂಡಿ ಮತ್ತು ಒಳಚಂಡಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಗುಂಡಿ ಬಿದ್ದ ಸಿಸಿ ರಸ್ತೆಗಳ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.