
ಶಿವಯೋಗಮಂದಿರ (ಬಾದಾಮಿ): ಶಿವಯೋಗಮಂದಿರದ ಸಂಸ್ಥಾಪಕ ವೀರಶೈವ ಲಿಂಗಾಯತ ಧರ್ಮ ಜಾಗೃತಿ ರೂವಾರಿ ಪರಮ ತಪಸ್ವಿ ಹಾನಗಲ್ ಕುಮಾರೇಶ್ವರ ಸ್ವಾಮೀಜಿ ರಥೋತ್ಸವವು ಸೋಮವಾರ ಭಕ್ತಸ್ತೋಮದ ಹರ್ಷೋದ್ಘಾರದೊಂದಿಗೆ ಸಂಭ್ರಮದಿಂದ ನಡೆಯಿತು.
ಬಾಳೆಗಿಡ, ಪುಷ್ಪಮಾಲೆ, ರುದ್ರಾಕ್ಷಿ ಸರದೊಂದಿಗೆ ಅಲಂಕಾರ ಕೈಗೊಂಡ ರಥದಲ್ಲಿ ಕುಮಾರ ಸ್ವಾಮೀಜಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ರಥಕ್ಕೆ ಚಾಲನೆ ನೀಡಿದರು.
ಶಿವಯೋಗಮಂದಿರ ಸಮೀಪ ಉತ್ತರವಾಹಿನಿಯಾಗಿ ಶಾಂತವಾಗಿ ಹರಿಯುತ್ತಿರುವ ಮಲಪ್ರಭೆ ನದಿಯಂತೆ ರಥವು ಉತ್ತರ ವಾಹಿನಿಯತ್ತ ಶಾಂತವಾಗಿ ಸಾಗಿತು. ರಥವು ಸಾಗಿದಂತೆ ಪರಮ ತಪಸ್ವಿ ಕುಮಾರ ಶ್ರೀಗಳಿಗೆ ಭಕ್ತರ ಜೈಕಾರದ ಹರ್ಷೋದ್ಘಾರ ಮುಗಿಲು ಮುಟ್ಟುವಂತಿತ್ತು.
ಭಕ್ತರು ರಥದ ಚಕ್ರಕ್ಕೆ ತೆಂಗಿನಕಾಯಿ ಮತ್ತು ರಥಕ್ಕೆ ಪುಷ್ಪವನ್ನು ಅರ್ಪಿಸಿ ಭಕ್ತಿಭಾವ ಮೆರೆದರು. ರಥೋತ್ಸವದ ನಂತರ ಭಕ್ತರು ಕುಮಾರಶ್ರೀಗಳ ಕರ್ತೃ ಗದ್ದುಗೆಯ ದರ್ಶನ ಪಡೆದರು.
ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷ ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಫಕೀರೇಶ್ವರಮಠದ ದಿಂಗಾಲೇಶ್ವರ ಸ್ವಾಮೀಜಿ, ನಾಡಿನ ವಿವಿಧ ಮಠಾಧೀಶರು, ಶಿವಯೋಗಮಂದಿರ ವಟುಸಾಧಕರು, ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಗಣ್ಯರು ಮತ್ತು ಸುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.