ADVERTISEMENT

ಬಾಗಲಕೋಟೆ | ಸ್ಥಗಿತಗೊಂಡ ಜಾಗರಿ ಪಾರ್ಕ್

ಸಾವಯವ ಕಬ್ಬು ಬೆಳೆದ ರೈತರು ಅತಂತ್ರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 5:01 IST
Last Updated 4 ಜುಲೈ 2025, 5:01 IST
ದೂಳು ಹಿಡಿದಿರುವ ಜಾಗರಿ ಪಾರ್ಕ್‌ನ ಯಂತ್ರಗಳು
ದೂಳು ಹಿಡಿದಿರುವ ಜಾಗರಿ ಪಾರ್ಕ್‌ನ ಯಂತ್ರಗಳು   

ಬಾಗಲಕೋಟೆ: ಸಕ್ಕರೆ ಉತ್ಪಾದನೆಯಲ್ಲಿ ಹೆಸರು ಮಾಡಿರುವಂತೆ ಜಿಲ್ಲೆಯು ಬೆಲ್ಲದ ಉತ್ಪಾದನೆಯಲ್ಲಿಯೂ ಹೆಸರು ಮಾಡಿದೆ. ಸಾವಯವ ಬೆಲ್ಲ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2013ರಲ್ಲಿ ಮುಧೋಳದಲ್ಲಿ ಆರಂಭಗೊಂಡಿದ್ದ ಸಾವಯವ ಬೆಲ್ಲ ತಂತ್ರಜ್ಞಾನ ಸಂಸ್ಥೆ (ಜಾಗರಿ ಪಾರ್ಕ್) ಸ್ಥಗಿತಗೊಂಡಿದೆ.

2013ರಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ₹8 ಕೋಟಿ ವೆಚ್ಚ ಮಾಡಿ ವರ್ಷಕ್ಕೆ 3,000 ಟನ್‌ ಬೆಲ್ಲ ಉತ್ಪಾದನೆಯ ಜಾಗರಿ ಪಾರ್ಕ್‌ ಆರಂಭಿಸಲಾಗಿತ್ತು. ಧಾರವಾಡದ ಕೃಷಿ ವಿಶ್ವವಿದ್ಯಾಲಯ ಇದರ ಉಸ್ತುವಾರಿ ವಹಿಸಿಕೊಂಡಿತ್ತು. ಗುತ್ತಿಗೆ ಪಡೆದಿದ್ದ ಕಂಪನಿ ನಷ್ಟವಾಗುತ್ತಿದೆ ಎಂದು ಹಿಂದೆ ಸರಿದಿದ್ದರಿಂದ ಪಾರ್ಕ್‌ ಬಂದ್‌ ಆಗಿದೆ.

ಐದು ವರ್ಷಗಳ ಹಿಂದೆ ಮುಧೋಳದ ರೈತ ಉತ್ಪಾದನಾ ಸಂಸ್ಥೆ ಜಾಗರಿ ಪಾರ್ಕ್‌ ಅನ್ನು ಲೀಸ್‌ ಪಡೆದಿತ್ತು. ಕೃವಿವಿ ಹಾಗೂ ಸಂಸ್ಥೆ ನಡುವೆ ಆಗಿದ್ದ ಒಪ್ಪಂದದಂತೆ ಪ್ರತಿ ಟನ್‌ಗೆ ₹452 ಪಾವತಿಸಬೇಕಿತ್ತು. ನಷ್ಟವಾಗಿರುವುದರಿಂದ ವಿಶ್ವವಿದ್ಯಾಲಯಕ್ಕೆ ಪಾವತಿಸಬೇಕಿದ್ದ ₹35 ಲಕ್ಷ ಪಾವತಿಸಲಾಗುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

ಎರಡು ವರ್ಷಗಳಿಂದ ಪಾರ್ಕ್‌ ಕಾರ್ಯ ನಿರ್ವಹಿಸುತ್ತಿಲ್ಲ. ಅದರಲ್ಲಿದ್ದ ಯಂತ್ರಗಳು ದೂಳು ಹಿಡಿದಿವೆ. ಜಾಗರಿ ಪಾರ್ಕ್‌ ಸ್ಥಾಪನೆಯಿಂದ ಕಬ್ಬಿಗೆ ಉತ್ತಮ ಬೆಲೆ ಸಿಗಬಹುದು ಎಂದುಕೊಂಡಿದ್ದ ರೈತರೂ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಹಾಲಿಂಗಪುರದ ಬೆಲ್ಲದ ಮಾರುಕಟ್ಟೆ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ. ವಿವಿಧ ರಾಜ್ಯಗಳಿಗೆ ಇಲ್ಲಿಂದಲೇ ಬೆಲ್ಲ ಹೋಗುತ್ತದೆ. ಹಲವಾರು ರೈತರು, ರೈತ ಉತ್ಪಾದಕ ಸಂಸ್ಥೆಗಳು ಸಾವಯವ ಬೆಲ್ಲದ ಉತ್ಪಾದನೆ ಮಾಡುತ್ತಿವೆ. ಉತ್ತಮ ಮಾರುಕಟ್ಟೆಯನ್ನು ಹೊಂದಿವೆ. ಆದರೆ, ಸರ್ಕಾರಿ ಸಂಸ್ಥೆಯೊಂದು ಸಂಕಷ್ಟಕ್ಕೆ ಸಿಲುಕಿದೆ.

ಸಾವಯವ ಉತ್ಪನ್ನದ ಬಗ್ಗೆ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಮಾತನಾಡುತ್ತಿರುತ್ತಾರೆ. ಆದರೆ, ಸಾವಯವ ಬೆಲ್ಲದ ಪಾರ್ಕ್‌ ಎರಡು ವರ್ಷಗಳಿಂದ ಬಂದ್ ಆಗಿದ್ದರೂ ಆರಂಭಿಸುವತ್ತ ಲಕ್ಷ್ಯ ಹರಿಸಿಲ್ಲ. ಮಾರುಕಟ್ಟೆಯಿಲ್ಲದೇ ಸಾವಯವ ಕಬ್ಬು ಬೆಳೆದ ರೈತರೂ ಅನಿವಾರ್ಯವಾಗಿ ಕಾರ್ಖಾನೆಗೆ ಕಬ್ಬು ಸಾಗಿಸಬೇಕಾದ ಸ್ಥಿತಿ ಎದುರಾಗಿದೆ.

ಮುಧೋಳದ ಜಾಗರಿ ಪಾರ್ಕ್‌ನ ಕಟ್ಟಡ
ಯಾವುದೇ ಸಂಸ್ಥೆ ಮುಂದೆ ಬರದಿದ್ದರೆ ವಿಶ್ವವಿದ್ಯಾಲಯದಿಂದ ಆರಂಭಿಸುವ ಯೋಚನೆ ನಡೆದಿದೆ. ಅಗತ್ಯ ಸಿಬ್ಬಂದಿಯ ಅವಶ್ಯವಿದೆ
ಪಿ.ಎಲ್‌. ಪಾಟೀಲ ಕುಲಪತಿ ಕೃಷಿ ವಿಶ್ವವಿದ್ಯಾಲಯ ಧಾರವಾಡ

ಟೆಂಡರ್ ಕರೆದರೆ ಯಾರೂ ಭಾಗವಹಿಸಿಲ್ಲ ಜಾಗರಿ ಪಾರ್ಕ್‌ ಪಡೆದಿದ್ದ ಸಂಸ್ಥೆಯ ಗುತ್ತಿಗೆಯ ಐದು ವರ್ಷ ಪೂರ್ಣಗೊಂಡಿದೆ. ಟೆಂಡರ್ ಕರೆದರೂ ಯಾವ ಸಂಸ್ಥೆಯೂ ಭಾಗವಹಿಸದ್ದರಿಂದ ಪಾರ್ಕ್ ಆರಂಭ ನನೆಗುದಿಗೆ ಬಿದ್ದಿದೆ. ‘ಹಿಂದೆ ಗುತ್ತಿಗೆ ಪಡೆದಿದ್ದ ಸಂಸ್ಥೆ ಕೃವಿವಿಗೆ ₹30 ಲಕ್ಷ ಪಾವತಿಸಬೇಕಿದೆ. ನಷ್ಟವಾಗಿದ್ದರಿಂದ ಮನ್ನಾ ಮಾಡುವಂತೆ ಮನವಿ ಮಾಡಿಕೊಂಡಿದ್ದು ಈ ಕುರಿತು ಕಾನೂನು ಸಲಹೆ ಕೇಳಲಾಗಿದೆ’ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಿ.ಬಿ. ಬಿರಾದಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.