ADVERTISEMENT

ಬಾಗಲಕೋಟೆ | ಸರ್ಕಾರಿ ಪ್ರಥಮ ಕಾಲೇಜು ದರ್ಜೆ ‍ಪ್ರವೇಶಕ್ಕೆ ಸಾಲು

2,800 ವಿದ್ಯಾರ್ಥಿಗಳು * ಐದು ವಿಭಾಗ, ಎರಡು ಪಾಳಿಗಳಲ್ಲಿ ತರಗತಿ

ಬಸವರಾಜ ಹವಾಲ್ದಾರ
Published 1 ಜುಲೈ 2025, 23:33 IST
Last Updated 1 ಜುಲೈ 2025, 23:33 IST
ಬಾಗಲಕೋಟೆ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೋಟ
ಬಾಗಲಕೋಟೆ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೋಟ   

ಬಾಗಲಕೋಟೆ: ಸರ್ಕಾರಿ ಶಾಲೆ, ಕಾಲೇಜುಗಳಿಗೆ ಮಕ್ಕಳನ್ನು ಸೆಳೆಯಲು ಭಾರಿ ಪ್ರಯಾಸ ಪಡಬೇಕು. ಆದರೆ, ಬಾಗಲಕೋಟೆಯ ನವನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರು ಹೆಚ್ಚು ಕಸರತ್ತು ಮಾಡಬೇಕಿಲ್ಲ. ಅಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಸಾಲುಗಟ್ಟಿ ನಿಲ್ಲುತ್ತಾರೆ.

ವಿದ್ಯಾರ್ಥಿಗಳ ಪ್ರವೇಶ ಹೆಚ್ಚಳದಿಂದ ಬೆಳಿಗ್ಗೆ ಮತ್ತು ಮಧ್ಯಾಹ್ನದ ಪಾಳಿಯಲ್ಲಿ ಕಾಲೇಜು ನಡೆಸಲಾಗುತ್ತದೆ. ಪಿಯುಸಿ ಫಲಿತಾಂಶ ಶುರುವಾಗುತ್ತಿದ್ದಂತೆಯೇ ಪ್ರವೇಶಕ್ಕೆ ಪೈಪೋಟಿ ಆರಂಭವಾಗುತ್ತದೆ. ಬಾಗಲಕೋಟೆ ಜಿಲ್ಲೆ ಅಲ್ಲದೇ, ಬೆಳಗಾವಿ, ಕೊಪ್ಪಳ, ವಿಜಯಪುರ, ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳೂ ಪ್ರವೇಶ ಪಡೆದಿದ್ದಾರೆ.

ಈ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿಬಿಎ, ಬಿಸಿಎ ಪದವಿ ಅಧ್ಯಯನಕ್ಕೆ ಅವಕಾಶವಿದೆ. 2,800 ವಿದ್ಯಾರ್ಥಿಗಳು ಇದ್ದಾರೆ. ಈ ವರ್ಷ ಈಗಾಗಲೇ 900 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಜುಲೈ 10ರವರೆಗೆ ಪ್ರವೇಶಕ್ಕೆ ಅವಕಾಶವಿದೆ. 80 ವಿದ್ಯಾರ್ಥಿಗಳಿಗೆ ಒಂದು ತರಗತಿ ಮಾಡಲಾಗುತ್ತಿದ್ದು, ಎ,ಬಿ,ಸಿ,ಡಿ ಮತ್ತು ಇ  ವಿಭಾಗಗಳಲ್ಲಿ ತರಗತಿಗಳನ್ನು ವಿಂಗಡಿಸಲಾಗಿದೆ.

ADVERTISEMENT

180 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿರುವ ಬಿಸಿಎ ಮೊದಲ ವರ್ಷದ ಪ್ರವೇಶ ಪ್ರಕ್ರಿಯೆ ಒಂದೇ ವಾರದಲ್ಲಿ ಪೂರ್ಣಗೊಳ್ಳುತ್ತದೆ. ಉಳಿದ ವಿಭಾಗಗಳಿಗೆ ಸೀಟಿನ ಮಿತಿ ಇಲ್ಲದ್ದರಿಂದ ಪ್ರವೇಶ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಜನಪ್ರತಿನಿಧಿಗಳಿಂದ ಹೇಳಿಸಿಯೂ ಕೆಲವರು ಪ್ರವೇಶಕ್ಕೆ ಬರುತ್ತಾರೆ.

ತರಗತಿಗಳಿಗೆ 22 ಕೊಠಡಿಗಳಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಸಾಲುವುದಿಲ್ಲ. ಹೀಗಾಗಿ ಬೆಳಿಗ್ಗೆ 7.30ಕ್ಕೆ ಅಂತಿಮ ವರ್ಷದ ವಿದ್ಯಾರ್ಥಿಗಳ ತರಗತಿಗಳು, ಮಧ್ಯಾಹ್ನ 12 ರಿಂದ ಮೊದಲ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳ ತರಗತಿಗಳು ನಡೆಯುತ್ತವೆ. ಉತ್ತಮ ಬೋಧನೆ ಕಾರಣಕ್ಕೆ ಪ್ರವೇಶ ಸಂಖ್ಯೆ ಹೆಚ್ಚಾಗುತ್ತಿದೆ.

‘2006ರಲ್ಲಿ ಕಾಲೇಜು ಆರಂಭವಾಗಿದೆ. 2018ರವರೆಗೆ ವಿದ್ಯಾರ್ಥಿಗಳ ಸಂಖ್ಯೆ 300 ಆಸುಪಾಸಿನಲ್ಲಿತ್ತು. 6 ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, 2,800ಕ್ಕೆ ತಲುಪಿದೆ. ಮೊದಲ ಮಹಡಿ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದ್ದು, ಶೀಘ್ರವೇ ಕೊಠಡಿಗಳನ್ನು ನಿರ್ಮಿಸಲಾಗುವುದು’ ಎಂದು ಪ್ರಾಚಾರ್ಯ ಅರುಣಕುಮಾರ ಗಾಳಿ ತಿಳಿಸಿದರು.

‘ಕಾಲೇಜು ಪ್ರತಿ ವರ್ಷ ಶೇ 80ರಷ್ಟು ಫಲಿತಾಂಶ ಗಳಿಸುತ್ತದೆ. ಸಕಾಲಕ್ಕೆ ತರಗತಿ ನಡೆಯುತ್ತವೆ. ಶಿಸ್ತು ಪಾಲನೆ ಜೊತೆಗೆ ಕ್ರೀಡೆಗೂ ಪ್ರೋತ್ಸಾಹವಿದೆ. ಉದ್ಯೋಗಾವಕಾಶ ಕಲ್ಪಿಸಲಾಗುತ್ತದೆ’ ಎಂಬುದು ಸಮಾಧಾನ’ ಎಂದು ವಿದ್ಯಾರ್ಥಿಗಳ ಪೋಷಕರು ತಿಳಿಸಿದರು.

ಓದಿನ ಜೊತೆಗೆ ವಿದ್ಯಾರ್ಥಿಗಳ ಆಸಕ್ತಿಯ ಕ್ರೀಡೆ ಎನ್‌ಸಿಸಿ ಎನ್‌ಎಸ್‌ಎಸ್‌ ಸ್ಕೌಟ್ಸ್‌ಗೂ ಆದ್ಯತೆ ನೀಡಲಾಗಿದೆ
ಅರುಣಕುಮಾರ ಗಾಳಿ ಪ್ರಾಚಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನವನಗರ.

80 ಮಂದಿ ಅತಿಥಿ ಉಪನ್ಯಾಸಕರು

ಕಾಲೇಜಿಗೆ 30 ಉಪನ್ಯಾಸಕರ ಹುದ್ದೆಗಳ ಮಂಜೂರಾತಿ ಇದ್ದು 21 ಭರ್ತಿಯಾಗಿವೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಹಿನ್ನಲೆಯಲ್ಲಿ ಸರ್ಕಾರದ ಅನುಮತಿ ಪಡೆದು 80 ಮಂದಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ಎನ್‌ಸಿಸಿ ಎನ್‌ಎಸ್‌ಎಸ್‌ ಸ್ಕೌಟ್ಸ್ ಕ್ರೀಡೆಗೂ ಆದ್ಯತೆಯಿದೆ. ಈ ಕಾಲೇಜಿನ 19 ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಯುನಿವರ್ಸಿಟಿ ಬ್ಲೂ ಆಯ್ಕೆಯಾಗಿದ್ದಾರೆ.  ಉದ್ಯೋಗಾವಕಾಶ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಒದಗಿಸುವ ನಿಟ್ಟಿನಲ್ಲಿ ಘಟಕ ರಚಿಸಲಾಗಿದೆ. ಬೆಂಗಳೂರಿನ ಸ್ಪೆಕ್ಟ್ರಂ ಟಾಲೆಂಟ್‌ ಮ್ಯಾನೇಜ್‌ಮೆಂಟ್‌ ಕ್ವೆಸ್ಟ್‌ ಕಾರ್ಪೋರೇಷನ್‌ ಪ್ರೈವೇಟ್ ಲಿಮಿಟೆಡ್‌ ಟಾಟಾ ಐಫೋನ್‌ ಮ್ಯಾನುಫ್ಯಾಕ್ಚರ್ ಮಹೀಂದ್ರಾ ಸೇರಿ ಐದು ಕಂಪನಿಗಳೊಂದಿಗೆ ಕಾಲೇಜಿನ ಒಪ್ಪಂದ ಆಗಿದೆ. ಐದು ವರ್ಷಗಳಲ್ಲಿ 2 ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಲಭಿಸಿದೆ.

ಉದ್ಯೋಗಾವಕಾಶ

ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಒದಗಿಸುವ ನಿಟ್ಟಿನಲ್ಲಿ ಘಟಕ ರಚಿಸಲಾಗಿದೆ. ಬೆಂಗಳೂರಿನ ಸ್ಪೆಕ್ಟ್ರಂ ಟಾಲೆಂಟ್‌ ಮ್ಯಾನೇಜ್‌ಮೆಂಟ್‌, ಕ್ವೆಸ್ಟ್‌ ಕಾರ್ಪೋರೇಷನ್‌ ಪ್ರೈವೇಟ್ ಲಿಮಿಟೆಡ್‌, ಟಾಟಾ ಐಫೋನ್‌ ಮ್ಯಾನುಫ್ಯಾಕ್ಚರ್, ಮಹೀಂದ್ರಾ ಸೇರಿ ಐದು ಕಂಪನಿಗಳೊಂದಿಗೆ ಕಾಲೇಜಿನ ಒಪ್ಪಂದ ಆಗಿದೆ. ಐದು ವರ್ಷಗಳಲ್ಲಿ 2 ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.