ಬಾಗಲಕೋಟೆ: ‘ಬಂಜಾರಾ ಸಮಾಜದ ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತಿಯನ್ನು ಫೆ.15ರಂದು ಬಾಗಲಕೋಟೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು’ ಎಂದು ಭಾರತೀಯ ಬಂಜಾರಾ ಕ್ರಾಂತಿ ದಳ ಉತ್ತರ ಕರ್ನಾಟಕ ಅಧ್ಯಕ್ಷ ರಾಜು ಲಮಾಣಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಿಗ್ಗೆ 9.30ಕ್ಕೆ ಜಿಲ್ಲಾಡಳಿತ ಭವನದಿಂದ ಕಲಾ ಭವನದ ವರೆಗೆ ಸಾಂಸ್ಕೃತಿಕ ತಂಡಗಳೊಂದಿಗೆ ಸೇವಾಲಾಲ್ ಶ್ರೀಗ ಭಾವಚಿತ್ರ ಮೆರವಣಿಗೆ ಮಾಡಲಾಗುವುದು. ನಂತರ ಅಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ’ ಎಂದರು.
‘ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.
‘ಜಯಂತಿ ಅಂಗವಾಗಿ ಈಗಾಗಲೇ ತಾಂಡಾಗಳಲ್ಲಿ ತಿಂಗಳಿಂದ ಭಜನೆ, ಕೀರ್ತನೆಗಳು ನಡೆದಿವೆ. ಸೊರಗೊಂಡಕೊಪ್ಪದಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಂಡಾಗಳಲ್ಲಿ ಬೆಳಿಗ್ಗೆ ಜಯಂತಿ ಆಚರಿಸಿ, ಬಾಗಲಕೋಟೆಗೆ ಬರಬೇಕು’ ಎಂದು ಮನವಿ ಮಾಡಿದರು.
ತುಕಾರಾಂ ಲಮಾಣಿ, ಮೋತಿಲಾಲ್, ಬಿ.ಆರ್. ಚವ್ಹಾಣ, ಸುಭಾಸ ಚವ್ಹಾಣ ಇದ್ದರು.
Cut-off box - ಹಂತ ಹಂತವಾಗಿ ಕೆರೆಗಳ ಅಭಿವೃದ್ಧಿ: ವಿಜಯಾನಂದ ಕಾಶಪ್ಪನವರ ಹುನಗುಂದ: ‘ಸಣ್ಣ ಪುಟ್ಟ ರೈತರಿಗೆ ನೀರಾವರಿ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ತಾಲ್ಲೂಕಿನ ಬಿಸನಾಳ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ 2024-25ನೇ ಸಾಲಿನ ಅನುದಾನದಲ್ಲಿ ₹1 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಕೆರೆ ಸುಧಾರಣೆ ಕಾಮಗಾರಿ ಭೂಮಿಪೂಜೆ ಅಂಗವಾಗಿ ಗುರುವಾರ ನಡೆದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ‘ಬಿಸನಾಳ ಗ್ರಾಮದ ಕೆರೆ 97 ಹೆಕ್ಟೇರ್ ವಿಸ್ತಾರವಾದ ಪ್ರದೇಶ ಹೊಂದಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹ ಆಗುತ್ತಿದೆ. ರೈತರು ಇದರ ಪ್ರಯೋಜನೆ ಪಡೆದುಕೊಳ್ಳಬೇಕು. 2013-14ರಲ್ಲಿ ಇದೇ ಕೆರೆ ಅಭಿವೃದ್ಧಿಗೆ ₹98 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಸಣ್ಣ ನೀರಾವರಿ ಸಚಿವರಾದ ಬೋಸರಾಜ್ ಅವರ ಸಹಕಾರದಿಂದ ಈ ಬಾರಿ ಹೆಚ್ಚಿನ ಅನುದಾನ ಮಂಜೂರಾಗಿದ್ದು ಹಂತ ಹಂತವಾಗಿ ತಾಲ್ಲೂಕಿನ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ತಿಳಿಸಿದರು. ‘ತಾಲ್ಲೂಕಿನ ಕೆರೆಗಳು ಪುನರ್ವಸತಿ ಕೇಂದ್ರದ ಸ್ಥಿತಿಗತಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ರಸ್ತೆಗಳ ಅಭಿವೃದ್ಧಿಗೆ ಗಮನ ಹರಿಸಬೇಕಿದೆ. ಈಗಾಗಲೇ ತಾಲ್ಲೂಕಿನ ₹175 ಕೋಟಿ ವೆಚ್ಚದಲ್ಲಿ 170 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ’ ಎಂದರು. ಇಲಾಖೆ ಅಧಿಕಾರಿಗಳು ಹಾಗೂ ಬಿಸನಾಳ ಇದ್ದಲಗಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.