ADVERTISEMENT

ಬಾಗಲಕೋಟೆ: ಹೃದಯಾಘಾತದಿಂದ ಕಥೆಗಾರ ಅಬ್ಬಾಸ ಮೇಲಿನಮನಿ ನಿಧನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 12:25 IST
Last Updated 21 ಸೆಪ್ಟೆಂಬರ್ 2020, 12:25 IST
ಅಬ್ಬಾಸ ಮೇಲಿನಮನಿ
ಅಬ್ಬಾಸ ಮೇಲಿನಮನಿ   

ಬಾಗಲಕೋಟೆ: ಕಥೆಗಾರ ಅಬ್ಬಾಸ ಮೇಲಿನಮನಿ (66) ತೀವ್ರ ಹೃದಯಾಘಾತದಿಂದ ಸೋಮವಾರ ಚಿತ್ರದುರ್ಗದ ಪುತ್ರಿಯ ನಿವಾಸದಲ್ಲಿ ನಿಧನರಾದರು.

ಗುಳೇದಗುಡ್ಡದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯರಾಗಿ ನಿವೃತ್ತರಾಗಿದ್ದ ಅಬ್ಬಾಸ, ಕಥೆಗಾರನಾಗಿ ನಾಡಿನ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿದ್ದರು.

ಕೃಷ್ಣಾ ತೀರದ ಜನರ ಬದುಕು, ಸಾಮಾಜಿಕ, ಸಾಂಸ್ಕೃತಿಕ ವೈಶಿಷ್ಟ್ಯ, ವೈರುಧ್ಯ ಹಾಗೂ ತಲ್ಲಣಗಳನ್ನು ತಮ್ಮ ಕಥೆಗಳಲ್ಲಿ ಬಹು ಸೂಕ್ಷ್ಮವಾಗಿ ಕಟ್ಟಿಕೊಡುತ್ತಿದ್ದ ಅಬ್ಬಾಸ ಮೇಲಿನಮನಿ, ವೃತ್ತಿಯಲ್ಲಿ ಶಿಕ್ಷಕರಾಗಿ ಅಪಾರ ಶಿಷ್ಯ ಬಳಗವನ್ನು ಹೊಂದಿದ್ದಾರೆ.

ADVERTISEMENT

ಇಲ್ಲಿಯವರೆಗೆ ಒಂಬತ್ತು ಕಥಾ ಸಂಕಲನ, ಮೂರು ಕವನ ಸಂಕಲನ, ಮೂರು ಕಥಾ ಸಂಪುಟ, ಒಂದು ಕಾದಂಬರಿ, ಮೂರು ಲೇಖನಗಳ ಸಂಗ್ರಹ ಹಾಗೂ ಒಂಬತ್ತು ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ.

ಮಾಸ್ತಿ ಕಥಾ ಪ್ರಶಸ್ತಿ, ಡಾ. ಗೊರೂರು ಸಾಹಿತ್ಯ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳು ಅಬ್ಬಾಸ ಅವರಿಗೆ ಸಂದಿವೆ.

ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ, ಸುಧಾ, ಮಯೂರ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಅಬ್ಬಾಸ ಮೇಲಿನಮನಿ ಅವರ ಕಥೆಗಳು ಪ್ರಕಟವಾಗಿವೆ.

ಚಿತ್ರದುರ್ಗದಿಂದ ಪಾರ್ಥೀವ ಶರೀರವನ್ನು ಇಲ್ಲಿನ ನವನಗರದ ಮೂರನೇ ಸೆಕ್ಟರ್ ನಲ್ಲಿರುವ ಮನೆಗೆ ರಾತ್ರಿ ತರಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅಬ್ಬಾಸ ಮೇಲಿನಮನಿ ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.