ಪ್ರಾತಿನಿಧಿಕ ಚಿತ್ರ
ಬಾಗಲಕೋಟೆ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ವಿದ್ಯಾರ್ಥಿಗಳನ್ನು ಉತ್ತೇಜಿಸಲು ದಾನಿಗಳ ನೆರವಿನಿಂದ ನಗದು ಬಹುಮಾನ ನೀಡಲು ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ ಉದ್ದೇಶಿಸಿದೆ. ಈ ಉದ್ದೇಶಕ್ಕಾಗಿ ಈವರೆಗೆ ₹1.08 ಕೋಟಿ ದೇಣಿಗೆ ಸಂಗ್ರಹವಾಗಿದೆ.
ಶಾಲಾ ಶಿಕ್ಷಣ ಇಲಾಖೆಯು ಆರಂಭಿಸಿರುವ ಪ್ರೋತ್ಸಾಹ ಧನ ನೀಡುವ ಈ ಯೋಜನೆಗೆ ಜಿಲ್ಲೆಯ ದಾನಿಗಳು ಸ್ಪಂದಿಸಿದ್ದಾರೆ. 2025–26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಶೇ 67.78 ಫಲಿತಾಂಶ ಗಳಿಸಿದ್ದು, ರಾಜ್ಯಕ್ಕೆ 16ನೇ ಸ್ಥಾನದಲ್ಲಿದೆ. ಈ ಬಾರಿ ಒಟ್ಟಾರೆ ಫಲಿತಾಂಶ ಉತ್ತಮಗೊಳಿಸುವುದು ಇದರ ಉದ್ದೇಶ.
‘ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಸೇರಿ 492 ಶಾಲೆಗಳಿವೆ. ಈ ಶಾಲೆಗಳಲ್ಲಿ ತಂದೆ–ತಾಯಿ ಸ್ಮರಣೆ, ಜನ್ಮದಿನ ಕಾರ್ಯಗಳ ಹೆಸರಿನಲ್ಲಿ ದಾನಿಗಳಿಂದ ದೇಣಿಗೆಯನ್ನು ಸಂಗ್ರಹಿಸಲಾಗುತ್ತಿದೆ. ಉತ್ತಮ ಸ್ಪಂದನೆ ದೊರೆತಿದೆ. ಇನ್ನಷ್ಟು ಮೊತ್ತ ಸಂಗ್ರಹದ ನಿರೀಕ್ಷೆ ಇದೆ’ ಎನ್ನುತ್ತಾರೆ ಡಿಡಿಪಿಐ ಅಜಿತ್ ಮನ್ನಿಕೇರಿ.
‘ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ, ಮಧ್ಯಮ ವರ್ಗದ ಮಕ್ಕಳು ಇರುತ್ತಾರೆ. ಶಾಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸುವ ಮಕ್ಕಳಿಗೆ ಹಾಗೂ ಯಾವುದೇ ವಿಷಯದಲ್ಲಿ ಶೇ100ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಗುತ್ತದೆ. ಇದು ಪಿಯುಸಿ ಅಧ್ಯಯನಕ್ಕೂ ನೆರವಾಗುತ್ತದೆ’ ಎಂದರು.
ರಾಜ್ಯ ಸರ್ಕಾರವು ಶೇ 100ರಷ್ಟು ಫಲಿತಾಂಶ ಪಡೆಯುವ ಸರ್ಕಾರಿ ಶಾಲೆಗೆ ₹25 ಸಾವಿರ ಬಹುಮಾನ ನೀಡುತ್ತದೆ. ಆ ಮೊತ್ತವನ್ನು ಶಾಲೆಯ ಶೈಕ್ಷಣಿಕ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತದೆ. ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಮೊದಲ ಮೂರು ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ತಲಾ ₹50 ಸಾವಿರ ನಗದು ನೀಡಲಾಗುತ್ತದೆ.
ಇದೇ ಮಾದರಿಯಲ್ಲಿ ಜಿಲ್ಲೆಯ ಪ್ರತಿ ಶಾಲೆಯಲ್ಲಿ ಮೊದಲ ಮೂರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿದರೆ ಹೇಗೆ ಎಂಬ ಯೋಚನೆ ಬಂದಿದ್ದೇ ತಡ ಶಿಕ್ಷಣ ಇಲಾಖೆ ಉಪನಿರ್ದೇಶ ಅಜಿತ್ ಮನ್ನಿಕೇರಿ, ಪ್ರೋತ್ಸಾಹ ಧನ ಯೋಜನೆಯ ಜಾರಿಗೆ ಮುಂದಾದರು.
ವಿದ್ಯಾರ್ಥಿಗಳ ಪೋಷಕರು, ಉದ್ಯಮಿಗಳು, ಸಂಘ–ಸಂಸ್ಥೆಗಳವರಿಂದ ದೇಣಿಗೆ ಸಂಗ್ರಹಿಸಲು ನಿರ್ಧರಿಸಿ, ಜ.26ರಂದು ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿಷಯ ಪ್ರಕಟಿಸಿ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.