
ಬಾಗಲಕೋಟೆ: ಬೀದಿ ನಾಯಿ ಕಚ್ಚಿ ಗಂಭೀರವಾಗಿ ಗಾಯಗೊಂಡಿದ್ದ 10 ವರ್ಷದ ಬಾಲಕಿ ಅಲಿನಾ ಲೋಕಾಪುರ, ಬುಧವಾರ ಹುಬ್ಬಳ್ಳಿಯ ಕೆಎಂಸಿಆರ್ಐ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ನವನಗರದ ಸೆಕ್ಟರ್ ನಂಬರ್ 15ರಲ್ಲಿ ವಾಸವಿದ್ದ ಅಲಿನಾಗೆ ಡಿಸೆಂಬರ್ 29ರಂದು ಮನೆಯ ಎದುರು ಬೀದಿ ನಾಯಿ ಕಚ್ಚಿತ್ತು. ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ನಂತರ ಹುಬ್ಬಳ್ಳಿಯ ಕೆಎಂಸಿಆರ್ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಕುರಿ, ದನಗಳಿಗೆ ನಾಯಿಗಳು ಕಡಿದಾಗಲೇ ದೂರು ನೀಡಲಾಗಿತ್ತು. ಆದರೆ, ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ. ಮಗಳ ಸಾವಿಗೇ ಅಧಿಕಾರಿಗಳೇ ಕಾರಣ’ ಎಂದು ಅಲಿನಾ ತಂದೆ ರಾಜಸಾಬ್ ಲೋಕಾಪುರ ದೂರಿದರು. ‘ಮೃತ ಬಾಲಕಿ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದರು.
ಚಿಕ್ಕೋಡಿ ವರದಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ವೆಂಕಟೇಶ್ವರ ಗಲ್ಲಿಯಲ್ಲಿ 2 ವರ್ಷದ ಋತ್ವಿಕ ಆನಂದ ಕುದುರೆ ಎಂಬ ಮಗುವಿನ ಮೇಲೆ ಬುಧವಾರ ಬೀದಿ ನಾಯಿಗಳು ದಾಳಿ ಮಾಡಿ, ಗಾಯಗೊಳಿಸಿವೆ. ಮಗುವನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಮಗು ಚೇತರಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.