ಜಮಖಂಡಿ: ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ಸಂಪೂರ್ಣ ಹದಗೆಟ್ಟಿದೆ, ಆರ್ಥಿಕತೆಯಲ್ಲಿ ಮುಗ್ಗರಿಸಿ ಅಭಿವೃದ್ಧಿ ಶೂನ್ಯವಾಗಿದೆ, ಸಾಮಾನ್ಯ ಜನರ ಬದುಕು ಪರದಾಡುವಂತಾಗಿ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ಇಲ್ಲಿನ ಮುಧೋಳ ರಸ್ತೆಯಲ್ಲಿ ಬುಧವಾರ ಬಿಜೆಪಿ ಪಕ್ಷದಿಂದ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಿದರು.
ಬೆಂಗಳೂರು ಹಿಡಿದು ರಾಜ್ಯದ ಎಲ್ಲ ನಗರ, ಪಟ್ಟಣಗಳ ಹಾಗೂ ಹಳ್ಳಿಗಳ ರಸ್ತೆಗಳು ಪೂರ್ತಿಯಾಗಿ ಹದಗೆಟ್ಟಿದ್ದು, ವಾಹನಗಳು ಓಡಾಡುವದು ಬಿಡಿ ಅಲ್ಲಿ ನಡೆದುಕೊಂಡು ಹೋಗಲೂ ಅಸಾಧ್ಯವಾಗಿದೆ ಎಂದರು.
ಈ ಹಿಂದೆ ಗುತ್ತಿಗೆದಾರರು ಮಾಡಿರುವ ಕಾಮಗಾರಿಗಳಿಗೆ ಎರಡು ವರ್ಷ ಕಳೆದರೂ ಬಿಲ್ ಪಾವತಿಯಾಗುತ್ತಿಲ್ಲ, ಬಿಲ್ ಪಡೆಯಲು ಅಧಿಕಾರಿಗಳು ಶೇ.60 ರಷ್ಟು ಕಮಿಶನ್ ಕೇಳುತ್ತಿದ್ದಾರೆ. ಹೀಗಾಗಿ ಯಾರೂ ಸರ್ಕಾರಿ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಹೊಸ ರಸ್ತೆಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಹರಿಹಾಯ್ದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಹಣ ಸಂಪೂರ್ಣವಾಗಿ ಖಾಲಿಯಾಗಿದೆ, ಸರ್ಕಾರ ನಡೆಸುವದಕ್ಕಿಂತ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದರು.
ಡಾ. ವಿಜಯಲಕ್ಷ್ಮೀ ತುಂಗಳ, ಅಜಯ ಕಡಪಟ್ಟಿ, ಮಲ್ಲು ದಾನಗೌಡ, ಸಿ.ಟಿ.ಉಪಾಧ್ಯ, ಧರೆಪ್ಪ ಗುಗ್ಗರಿ, ಪ್ರಶಾಂತ ಗಾಯಕವಾಡ, ಸುರೇಶಗೌಡ ಪಾಟೀಲ, ಕಾಶಿನಾಥ ಚನವೀರ, ಹಣಮಂತ ಲಿಗಾಡೆ, ಯಮನೂರ ಮೂಲಂಗಿ, ಶಂಕರ ಕಾಳೆ, ಶ್ರೀಧರ ಕಂಬಿ, ಕುಷಾಲ ವಾಘಮೊರೆ, ರಾಜು ಕಡಕೋಳ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.