ADVERTISEMENT

ಪಿ.ಸಿ.ಗದ್ದಿಗೌಡರ ಅಪರೂಪದ ಅತಿಥಿ: ಕಾಂಗ್ರೆಸ್ ಮುಖಂಡ ಬಿ.ಎಸ್.ಸಿಂಧೂರ ಲೇವಡಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 13:34 IST
Last Updated 26 ಮಾರ್ಚ್ 2024, 13:34 IST
 ಬಿ.ಎಸ್.ಸಿಂಧೂರ
 ಬಿ.ಎಸ್.ಸಿಂಧೂರ   

ಜಮಖಂಡಿ: ‘ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಕ್ಷೇತ್ರದ ಜನರ ಪಾಲಿಗೆ ಅಪರೂಪದ ಅತಿಥಿಯಾಗಿದ್ದಾರೆ. ಚುನಾವಣೆ ಬಂದಾಗ ಮಾತ್ರ ಜನರಿಗೆ ದರ್ಶನ ಭಾಗ್ಯ ನೀಡುತ್ತಾರೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಎಸ್.ಸಿಂಧೂರ ಲೇವಡಿ ಮಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘20 ವರ್ಷಗಳ ಅಧಿಕಾರಾವಧಿಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಎಷ್ಟು ಕೆಲಸ ಮಾಡಿದ್ದಾರೆ ಎಂದು ಜನರೆ ಲೆಕ್ಕ ಹಾಕುತಿದ್ದಾರೆ. ಬಾಗಲಕೋಟೆ ರೈಲು ಮಾರ್ಗ ಲೋಕಾಪೂರ ದಾಟಲೇ ಇಲ್ಲ. ಕುಡಚಿ ಮುಟ್ಟಬೇಕಾದರೂ ಇನ್ನೆಷ್ಟು ವರ್ಷಗಳು ಬೇಕು’ ಎಂದು ಪ್ರಶ್ನಿಸಿದರು.

‘ಅವರು ಸ್ವಂತ ಬಲದ ಮೇಲೆ ಒಮ್ಮೇಯೂ ಗೆಲುವು ಸಾಧಿಸಿಲ್ಲ. ಅಟಲ ಬಿಹಾರಿ ವಾಜಪೇಯಿ, ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಲ್ಲೇ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಸಂಸತ್ ಭವನದಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ’ ಎಂದು ಟೀಕಿಸಿದರು.

ADVERTISEMENT

‘ಬಿ.ಎಸ್.ಯಡಿಯೂರಪ್ಪ ಅವರ ಸ್ವಾರ್ಥ ನಿಲುವಿನಿಂದಾಗಿ ಬಿಜೆಪಿ ಅಪ್ಪ–ಮಕ್ಕಳ ಪಕ್ಷವಾಗಿ ಹೊರಹೊಮ್ಮಿದೆ.  ಬೇರೆ ಯಾರು ಬೆಳೆಯಬಾರದೆಂದು ಅವರು ಕುತಂತ್ರ ಮಾಡುತ್ತಿದ್ದಾರೆ. ಪಕ್ಷದ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ತಳಮಟ್ಟದಿಂದ ಪಕ್ಷ ಕಟ್ಟಿದ ಈಶ್ವರಪ್ಪ ಅವರನ್ನು ಕಡೆಗಣಿಸಿದ್ದಾರೆ. ಇದನ್ನೆಲ್ಲ ರಾಜ್ಯದ ಪ್ರಜ್ಞಾವಂತ ಮತದಾರರು ನೋಡುತ್ತಿದ್ದು, ಅವರಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದರು.

‘ಮಹಾರಾಷ್ಟ್ರ ದಲ್ಲಿ ಬಿಜೆಪಿ ಸರ್ಕಾರ ಇದ್ದು, ಕೋಯ್ನಾ ಜಲಾಶಯದಿಂದ ರಾಜ್ಯಕ್ಕೆ ಮೂರು ಟಿಎಂಸಿಯಾದರೂ ನೀರು ಬಿಡಿಸುವಲ್ಲಿ ಕೇಂದ್ರ ಸರ್ಕಾರಕ್ಕೆ ಇಲ್ಲಿನ ಬಿಜೆಪಿ ನಾಯಕರು ಒತ್ತಾಯ ಮಾಡಬೇಕು’ ಎಂದರು.

‘ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರು ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಅಖಂಡ ಜಿಲ್ಲೆ ಇದ್ದ ಸಂದರ್ಭದಲ್ಲಿ ಶಿವಾನಂದ ಪಾಟೀಲರು ಬಹಳಷ್ಟು ಕೆಲಸ ಮಾಡಿ, ಇಲ್ಲಿನ ಜನರ ಜೊತೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.