
ತೇರದಾಳ: ಸರ್ಕಾರ ಕಬ್ಬು ಬೆಲೆಯನ್ನು ಹೆಚ್ಚಳ ಮಾಡಬೇಕೆಂದು ನೆರೆಯ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ರಸ್ತೆ ಬಂದ್ ಹೋರಾಟದಿಂದಾಗಿ ಪಟ್ಟಣದ ಮೂಲಕ ಹಾಯ್ದು ಹೋಗುವ ಬಹಳಷ್ಟು ಬಸ್ಗಳು ಸೋಮವಾರ ಸಂಚರಿಸಲಿಲ್ಲ. ಇದರಿಂದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಪರದಾಡಬೇಕಾಯಿತು.
ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ರಸ್ತೆ ಬಂದ್ ಮಾಡಿ ನಡೆಸುತ್ತಿರುವ ಪ್ರತಿಭಟನೆಯ ಕಾವು ಹೆಚ್ಚುತ್ತಿದೆ. ನಿನ್ನೆಯವರೆಗೆ ಬೆಳಗಾವಿ ಜಿಲ್ಲೆಯ ಗುರ್ಲಾಪುರನಲ್ಲಿ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸುತ್ತಿದ್ದರು. ಸೋಮವಾರ ಹಾರೂಗೇರಿ ಕ್ರಾಸ್ನಲ್ಲಿ ಜಮಖಂಡಿ-ಕುಡಚಿ, ಹಾರೂಗೇರಿಯಲ್ಲಿ ಅಥಣಿ-ಗೋಕಾಕ ಹಾಗೂ ಚಿಕ್ಕಲಕಿ ಕ್ರಾಸ್ನಲ್ಲಿ ಜಮಖಂಡಿ-ವಿಜಯಪೂರ ರಸ್ತೆಯನ್ನು ಪ್ರತಿಭಟನಾಕಾರರು ಬಂದ್ ಮಾಡಿದ್ದರು. ಇದರಿಂದ ಸಂಚಾರ ಅಸ್ತವ್ಯಸ್ತವಾಯಿತು.
ಇದರ ಮುನ್ಸೂಚನೆ ಅರಿತ ಕೆಲವು ಬಸ್ಗಳನ್ನು ಸಾರಿಗೆ ಇಲಾಖೆಯೆ ಸಂಚಾರ ಸ್ಥಗಿತಗೊಳಿಸಿತ್ತು. ಇನ್ನೂ ಕೆಲವು ಬಸ್ಗಳು ತೇರದಾಳದ ಬಸ್ ನಿಲ್ದಾಣದಲ್ಲಿ ಬಂದು, ತೆರಳಿದವು. ಕೆಲವು ಪ್ರಯಾಣಿಕರು, ವಿದ್ಯಾರ್ಥಿಗಳು ಖಾಸಗಿ ಅಟೊಗಳ ಮೂಲಕವೂ ಸಂಚರಿಸಿದರು.
ಹಾರೂಗೇರಿ ಕ್ರಾಸ್ನಲ್ಲಿ ಧರಣಿ ಆರಂಭವಾಗಿರುವುದನ್ನು ತಿಳಿದು ಹಾರೂಗೇರಿಯಿಂದ ತೇರದಾಳಕ್ಕೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ಬಳಸಿ ಬರುತ್ತಿದ್ದ ಭಾರಿ ವಾಹನವೊಂದು ಸೀಮಿ ಲಕ್ಕವ್ವನ ದೇವಸ್ಥಾನದ ಹತ್ತಿರ ಕಚ್ಚಾರಸ್ತೆಯಲ್ಲಿ ಸಿಲುಕಿಕೊಂಡಿತು. ಎರಡು ಗಂಟೆಗೂ ಅಧಿಕ ಕಾಲ ಸಂಚಾರ ಬಂದ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಕಂಡು ಬಂತು.
ಲಾರಿಯಲ್ಲಿದ್ದ ವಸ್ತುಗಳನ್ನು ಕೆಳಗೆ ಇಳಿಸಿ ಅದನ್ನು ರಸ್ತೆಗೆ ತರುವಲ್ಲಿ ಎರಡು ಜೆಸಿಬಿ ಯಂತ್ರಗಳು, ಒಂದು ಕ್ರೇನ್ ಯಂತ್ರ ಹಾಗೂ ಸ್ಥಳೀಯರು ಯಶಸ್ವಿಯಾದರು.
‘ಒಂದು ದಿನ ಸಂಚಾರದಲ್ಲಿ ಸಮಸ್ಯೆ ಆದರೂ ಪರವಾಗಿಲ್ಲ. ರೈತರಿಗೆ ನ್ಯಾಯ ಸಿಗಬೇಕು. ಅವರ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲವಿದೆ’ ಎಂದು ಪ್ರಯಾಣಿಕ ರಾಮಪ್ಪ ನಂದೇಶ್ವರ ಅಟೊ ಹತ್ತಿ ಹೊರಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.