ಬಾಗಲಕೋಟೆ : 10ನೇ ತರಗತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 16 ವರ್ಷದ ಬಾಲಕಿಯನ್ನು 36 ವರ್ಷದ ವ್ಯಕ್ತಿಗೆ ಮದುವೆ ಮಾಡಿಕೊಡುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿ 1098ಗೆ ಬಂದ ಕರೆ ಆಧರಿಸಿ ಅಧಿಕಾರಿಗಳ ತಂಡ ಭಾನುವಾರ ಕಾರ್ಯಾಚರಣೆ ನಡೆಸಿ ಮದುವೆ ನಿಲ್ಲಿಸಿದೆ.
ಮುಧೋಳ ತಾಲ್ಲೂಕಿನ ಮಳಲಿಯಲ್ಲಿ ಬಾಲ್ಯವಿವಾಹಕ್ಕೆ ಸಿದ್ಧತೆ ನಡೆದಿತ್ತು. ಬೆಳಿಗ್ಗೆ 9.40ಕ್ಕೆ ಮಕ್ಕಳ ಸಹಾಯವಾಣಿ 1098ಗೆ ಬಾಲ್ಯ ವಿವಾಹದ ಬಗ್ಗೆ ಬಂದ ಮಾಹಿತಿ ಆಧರಿಸಿ ಬಾಗಲಕೋಟೆಯ ರೀಚ್ ಸಂಸ್ಥೆಯ ಮಕ್ಕಳ ಸಹಾಯವಾಣಿ ತಂಡದ ಸದಸ್ಯ ಮಲ್ಲಪ್ಪ ಮೆಳ್ಳಿಗೇರಿ ಕಾರ್ಯಪ್ರವೃತ್ತರಾಗಿದ್ದಾರೆ.
ಅಂಗನವಾಡಿ ಮೇಲ್ವಿಚಾರಕಿ ಸುಧಾ ಮಂಟೂರ, ಅಂಗನವಾಡಿ ಕಾರ್ಯಕರ್ತೆ ಭಾರತಿ ಬಾಳಗಿ, ಪಿಡಿಒ ಮನೋಹರ ಬ್ಯಾಕೋಡ, ಪೊಲೀಸ್ ಅಧಿಕಾರಿ ಜಗದೀಶ ದಳವಾಯಿ ಅವರ ಸಹಕಾರದೊಂದಿಗೆ ಬಾಲ್ಯ ವಿವಾಹ ಆಗುವುದನ್ನು ತಡೆದಿದ್ದಾರೆ.
ಬೆಳಗಾವಿ ಜಿಲ್ಲೆಯ ತೆವರಟ್ಟಿ ಗ್ರಾಮದ 36 ವರ್ಷದ ತುಕಾರಾಮ ಸಿದ್ದಪ್ಪ ಕೋಟಿ ಎಂಬುವವರೊಂದಿಗೆ ಮಧ್ಯಾಹ್ನ 12 ಗಂಟೆಗ ಮದುವೆ ನಿಶ್ವಯವಾಗಿತ್ತು. ಅದನ್ನು ತಡೆದು ಪೋಷಕರಿಗೆ ಕಾನೂನಿನ ಅರಿವು ನೀಡಿ ತಮ್ಮ ಮಗಳಿಗೆ 18 ವರ್ಷ ಮುಗಿಯುವವರೆಗೆ ಮದುವೆ ಮಾಡುವುದಿಲ್ಲ ಎಂಬ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಯಿತು.
ಕೊರೊನಾ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಬಾಲಕಿಯನ್ನು ಮನೆಯಲ್ಲೇ ಬಿಡಲಾಗಿದೆ. ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಮನೋಹರ ಬ್ಯಾಕೋಡ ಪ್ರತಿದಿನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.