ADVERTISEMENT

ಬಾಗಲಕೋಟೆ: ಬಳಕೆಯಾಗದ ಅಂಗವಿಕಲರ ಸಮುದಾಯ ಭವನ

ವಿದ್ಯುತ್ ಸಂಪರ್ಕವಿಲ್ಲ, ನೀರು ಸರಬರಾಜೂ ಇಲ್ಲ

ಬಸವರಾಜ ಹವಾಲ್ದಾರ
Published 3 ಡಿಸೆಂಬರ್ 2024, 4:09 IST
Last Updated 3 ಡಿಸೆಂಬರ್ 2024, 4:09 IST
ಬಾಗಲಕೋಟೆಯ ನವನಗರದ ಸೆಕ್ಟರ್ ನಂ.25ರಲ್ಲಿರುವ ಬಳಕೆಯಾಗದ ಅಂಗವಿಕಲರ ಭವನ
ಬಾಗಲಕೋಟೆಯ ನವನಗರದ ಸೆಕ್ಟರ್ ನಂ.25ರಲ್ಲಿರುವ ಬಳಕೆಯಾಗದ ಅಂಗವಿಕಲರ ಭವನ   

ಬಾಗಲಕೋಟೆ: ಅಂಗವಿಕಲರ ಚಟುವಟಿಕೆಗಳಿಗಾಗಿ ₹ 58 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸಮುದಾಯ ಭವನ ಉದ್ಘಾಟನೆಗೊಂಡು ಒಂದೂವರೆ ವರ್ಷವಾಗಿದ್ದರೂ ಬಳಕೆಯಾಗುತ್ತಿಲ್ಲ.

ಸೆಕ್ಟರ್‌ ನಂಬರ್ 25ರಲ್ಲಿ ಸ್ಟೇಟ್‌ ಬ್ಯಾಂಕ್‌ ಇಂಡಿಯಾ ಹಿಂದೆ ಎರಡು ವರ್ಷಗಳ ಹಿಂದೆ ವಿಶ್ವ ಅಂಗವಿಕಲರ ದಿನಾಚರಣೆ ದಿನದಂದೇ ಸಮುದಾಯ ಭವನ ನಿರ್ಮಾಣಕ್ಕೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಸಿ. ಪಾಟೀಲ ಚಲನೆ ನೀಡಿದ್ದರು. ವಿಧಾನಸಭೆ ಚುನಾವಣೆಗೆ ಮುನ್ನ ಅವಸರದಲ್ಲಿ ಉದ್ಘಾಟನೆಯನ್ನೂ ಮಾಡಲಾಗಿತ್ತು.

ಉದ್ಘಾಟನೆ ಕಾರ್ಯಕ್ರಮ ನಡೆದಿದ್ದು ಬಿಟ್ಟರೆ ಅಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಸದಾಕಾಲ ಬಾಗಿಲು ಹಾಕಿಯೇ ಇರುತ್ತದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದರೂ, ಪ್ರಯೋಜನಕ್ಕೆ ಬಂದಿಲ್ಲ. ವಿಶ್ವ ಅಂಗವಿಕಲರ ದಿನ ಆಚರಿಸಲಾಗುತ್ತದೆ. ಆದರೆ, ಸೌಲಭ್ಯಗಳು ಮಾತ್ರ ತಲುಪಿಸುತ್ತಿಲ್ಲ.

ADVERTISEMENT

ರಾಜ್ಯ ಹಣಕಾಸು ಆಯೋಗ, ಜಿಲ್ಲಾ ಪಂಚಾಯಿತಿ 15ನೇ ಹಣಕಾಸು ಯೋಜನೆಗಳಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ₹ 58 ಲಕ್ಷ ವೆಚ್ಚದಲ್ಲಿ ನೆಲ ಮಹಡಿ ನಿರ್ಮಾಣ ಮಾಡಲು ಆರಂಭಿಸಿ, ನಿರ್ಮಾಣವನ್ನೂ ಮಾಡಲಾಗಿದೆ.

ಕೆಲಸಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಬರುವ ಅಂಗವಿಕಲರ ಅನುಕೂಲಕ್ಕಾಗಿ ಮೊದಲ ಮಹಡಿಯಲ್ಲಿ ಅಂಗವಿಕಲರ ಡಾರ್ಮೆಟರಿ, ಐದು ಕೊಠಡಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆ ಕಾರ್ಯ ಏನಾಗಿದೆ ಎಂಬ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ.

‘ಸಮುದಾಯ ಭವನ ಉದ್ಘಾಟನೆಯಾಗಿದೆ. ಆದರೆ, ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಲ್ಲ. ನಾನೂ ಈಚೆಗೆ ಬಂದಿದ್ದು, ಪರಿಶೀಲಿಸುವೆ’ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಹಾಂತೇಶ ತಿಳಿಸಿದರು.

ಅವಸರದಲ್ಲಿ ಭವನ ಉದ್ಘಾಟನೆ ಎರಡನೇ ಹಂತದ ಕಾಮಗಾರಿ ನನೆಗುದಿಗೆ ವಿತರಣೆಯಾಗದ ತ್ರಿಚಕ್ರ ವಾಹನ
ಕಟ್ಟಡ ಕಟ್ಟಿದರೆ ಸಾಲದು. ಕಟ್ಟಡದ ಬಳಕೆ ಸರಿಯಾಗಿ ಆಗಬೇಕು. ಆಗಲೇ ಹಣ ವೆಚ್ಚ ಮಾಡಿದ್ದಕ್ಕೂ ಪ್ರಯೋಜನವಾಗುತ್ತದೆ. ಕೂಡಲೇ ಬಳಕೆಗೆ ಅವಕಾಶ ಮಾಡಿಕೊಡಬೇಕು
ಘನಶ್ಯಾಂ ಭಾಂಡಗೆ ಅಂಗವಿಕಲ ಹೋರಾಟಗಾರ

ದೂಳು ಹಿಡಿದಿರುವ ತ್ರಿಚಕ್ರ ವಾಹನಗಳು

ಬಾಗಲಕೋಟೆ: ಅಂಗವಿಕರಿಗೆ ವಿತರಿಸಲು 2023ರಲ್ಲಿ ಬಂದಿದ್ದ 30ಕ್ಕೂ ಹೆಚ್ಚು ತ್ರಿಚಕ್ರ ವಾಹನಗಳನ್ನು ಬಯಲಿನಲ್ಲಿ ನಿಲ್ಲಿಸಲಾಗಿತ್ತು. ದೂಳು ಹಿಡಿದು ಹಾಳಾಗುತ್ತಿರುವುದು ಮಾಧ್ಯಮಗಳಲ್ಲಿ ಪ್ರಕಟವಾದ ಮೇಲೆ ಅವುಗಳನ್ನು ತಂದು ಸಮುದಾಯ ಭವನದಲ್ಲಿ ಇಡಲಾಗಿದೆ. ವಿಧಾನಸಭಾ ಕ್ಷೇತ್ರವಾರು ಅವುಗಳನ್ನು ಬಿಡುಗಡೆ ಮಾಡಲಾಗಿತ್ತು. ತೇರದಾಳ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳ ಆಯ್ಕೆ ಮಾಡಿಲ್ಲ. ಸೂಕ್ತ ಫಲಾನುಭವಿಗಳಿಲ್ಲ ಎಂದು ಆಯ್ಕೆ ಮಾಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಜಿಲ್ಲೆಯಲ್ಲಿ ಸಾವಿರಾರು ಅಂಗವಿಕಲರು ತ್ರಿಚಕ್ರ ವಾಹನವಿಲ್ಲದೇ ಪರದಾಡುತ್ತಿದ್ದಾರೆ. ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಕೆಲಸ ಆಗಬೇಕಿದೆ. ‘ಶೀಘ್ರ ಫಲಾನುಭವಿಗಳ ಆಯ್ಕೆ ಮಾಡಿ ಹಂಚಿಕೆಗೆ ಕ್ರಮಕೈಗೊಳ್ಳಲಾಗುವುದು. ಸಮುದಾಯ ಭವನದ ಬಾಕಿ ಕೆಲಸದ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು’ ಎಂದು ಮಹಾಂತೇಶ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.