ಬಾಗಲಕೋಟೆ: ಕೊರೊನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವ್ಯಾಪಕ ಕಟ್ಟೆಚ್ಚರ ವಹಿಸಿದ್ದು, ಹೊರಗಿನಿಂದ ಜಿಲ್ಲೆಗೆ ಪ್ರವೇಶಿಸುವ ಎಲ್ಲರನ್ನೂ ತಪಾಸಣೆಗೊಳಪಡಿಸಿ ಬಿಡಲಾಗುತ್ತಿದೆ. ಇದಕ್ಕಾಗಿ ಶನಿವಾರ ರಾತ್ರಿ ಜಿಲ್ಲೆಯ ಗಡಿಗಳಾದ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್, ಇಳಕಲ್ ಸಮೀಪದ ಹನುಮನಾಳ, ಮುಧೋಳ ತಾಲ್ಲೂಕು ಲೋಕಾಪುರದಲ್ಲಿ ಚೆಕ್ಪೋಸ್ಟ್ಗಳನ್ನು ಆರಂಭಿಸಲಾಗಿದೆ.
ಸೋಮವಾರದಿಂದ ಬಾಗಲಕೋಟೆ ರೈಲು ನಿಲ್ದಾಣದಲ್ಲೂ ತಪಾಸಣೆ ಕಾರ್ಯ ಪ್ರಾರಂಭಿಸಲಾಗುವುದು. ಅಲ್ಲಿಯೂ ಚೆಕ್ಪೋಸ್ಟ್ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿಬೆಂಗಳೂರಿನಲ್ಲಿ ನೆಲೆಸಿರುವ ಸಾಫ್ಟ್ವೇರ್ ಎಂಜಿನಿಯರ್ಗಳು, ವೈದ್ಯರು ಹಾಗೂ ಖಾಸಗಿ ಕಂಪೆನಿಗಳಲ್ಲಿ ಬೇರೆ ಬೇರೆ ಉದ್ಯೋಗದಲ್ಲಿ ಇರುವವರು ತಾತ್ಕಾಲಿಕವಾಗಿ ತವರಿಗೆ ಮರಳಿ ಬರುತ್ತಿದ್ದಾರೆ. ಅವರಲ್ಲಿ ಯಾರಾದರೂ ವಿದೇಶದಿಂದ ಬಂದವರು ಇಲ್ಲವೇ ಸೋಂಕಿತರು ಇರಬಹುದು ಎಂಬುದು ಜಿಲ್ಲಾಡಳಿತದ ಆತಂಕ. ಹೀಗಾಗಿ ನಾಕಾಬಂದಿಗೆ ಮುಂದಾಗಿದೆ.
ಸಾರಿಗೆ ಸಂಸ್ಥೆ ಬಸ್ ಹಾಗೂ ಖಾಸಗಿ ವಾಹನಗಳಲ್ಲಿ ಬಂದವರನ್ನು ಜಿಲ್ಲೆಗೆ ಪ್ರವೇಶಿಸುವ ವೇಳೆ ತಡೆದು ಪರಿಶೀಲಿಸಿ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಿ ಬಿಡಲಾಗುತ್ತಿದೆ. ವೈದ್ಯರೊಬ್ಬರ ನೇತೃತ್ವದಲ್ಲಿ ನಾಲ್ವರು ಆರೋಗ್ಯ ಸಿಬ್ಬಂದಿ ಪಾಳಿ ಪ್ರಕಾರ ಹಗಲು ರಾತ್ರಿ ಚೆಕ್ಪೋಸ್ಟ್ಗಳಲ್ಲಿ ಕೆಲಸ ಮಾಡಲಿದ್ದಾರೆ ಎಂದು ದೇಸಾಯಿ ತಿಳಿಸಿದರು.
’ಹುಬ್ಬಳ್ಳಿ, ಬೆಳಗಾವಿಗೆ ವಿಮಾನದಲ್ಲಿ ಬಂದವರು ಬಾಗಲಕೋಟೆ ಜಿಲ್ಲೆಗೆ ಪ್ರವೇಶಿಸಬಹುದು. ಹೀಗಾಗಿ ಅವರನ್ನು ಕುಳಗೇರಿ ಕ್ರಾಸ್, ಲೋಕಾಪುರ ಚೆಕ್ಪೋಸ್ಟ್ಗಳಲ್ಲಿ ತಡೆದು ಆರೋಗ್ಯ ತಪಾಸಣೆ ಮಾಡಿ ಬಿಡಲಾಗುತ್ತಿದೆ‘ ಎನ್ನುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.