ADVERTISEMENT

ಸೋಂಕಿತರಲ್ಲಿ ಚಿಕಿತ್ಸೆ ನಂತರ ಇಬ್ಬರಿಗೆ ನೆಗೆಟಿವ್

ಆಸ್ಪತ್ರೆಯಿಂದ ಬಿಡುಗಡೆ: ಎರಡನೇ ವರದಿ ಬಂದ ನಂತರ ನಿರ್ಧಾರ–ಡಿಎಚ್‌ಒ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 15:59 IST
Last Updated 19 ಏಪ್ರಿಲ್ 2020, 15:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಗಲಕೋಟೆ: ಜಿಲ್ಲೆಯಲ್ಲಿ ಏಪ್ರಿಲ್ 6ರಂದು ಕೋವಿಡ್–19 ಸೋಂಕು ದೃಢಪಟ್ಟು ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರಿಗೆ (ಪಿ–162 ಹಾಗೂ ಪಿ–161) ಚಿಕಿತ್ಸೆಯ ನಂತರ ಈಗ ನೆಗೆಟಿವ್ ವರದಿ ಬಂದಿದೆ. ಜಿಲ್ಲೆಯಲ್ಲಿ ಸೋಂಕಿತರಸಂಖ್ಯೆ ಶನಿವಾರ 21ಕ್ಕೆ ಏರಿಕೆಯಾಗಿದ್ದ ಆತಂಕಕಾರಿ ಸುದ್ದಿಯ ನಡುವೆಯೇ ಮರುದಿನ ಈ ಸಮಾಧಾನಕರ ಸಂಗತಿ ಸುದ್ದಿ ಹೊರಬಿದ್ದಿದೆ.

ಕೋವಿಡ್–19 ಸೋಂಕಿನಿಂದ ಇಲ್ಲಿನ ಹಳೆಪೇಟೆ ಮಡು ಪ್ರದೇಶದ 75 ವರ್ಷದ ವೃದ್ಧ ಏಪ್ರಿಲ್ 3ರಂದು ಸಾವಿಗೀಡಾಗಿದ್ದರು. ನಂತರ ಅವರ ಕುಟುಂಬದವರ ಆರೋಗ್ಯ ತಪಾಸಣೆ ಮಾಡಿದಾಗ ವೃದ್ಧನ 54 ವರ್ಷದ ಪತ್ನಿ ಹಾಗೂ 58 ವರ್ಷದ ಸಹೋದರನಿಗೆ ಸೋಂಕು ದೃಢಪಟ್ಟಿತ್ತು.

’ಇಬ್ಬರೂ ಆಸ್ಪತ್ರೆಗೆ ದಾಖಲಾದ 14 ದಿನಗಳ ಬಳಿಕ ಇಬ್ಬರ ಗಂಟಲು ದ್ರವ ಮಾದರಿಯನ್ನು ತಪಾಸಣೆಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರ ವರದಿ ಬಂದಿದ್ದು, ಇಬ್ಬರಿಗೂ ಕೋವಿಡ್–19 ನೆಗೆಟಿವ್ ಬಂದಿದೆ‘ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಸದ್ಯ ಇಬ್ಬರಿಗೂ ಲಕ್ಷಣಗಳಿಲ್ಲ. 24 ಗಂಟೆಯ ಬಳಿಕ ಮತ್ತೊಮ್ಮೆ ಇಬ್ಬರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಆಗಲೂ ಅವರಿಗೆ ನೆಗೆಟಿವ್ ಬಂದರೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಬಗ್ಗೆ ಜಿಲ್ಲಾಡಳಿತ ತೀರ್ಮಾನ ಕೈಗೊಳ್ಳಲಿದೆ ಎಂದರು. ಆಸ್ಪತ್ರೆಯಿಂದ ಬಿಡುಗಡೆಯಾದರೂ ಅವರು 14 ದಿನಗಳ ಕಾಲ ಹೋಂ ಕ್ವಾರೆಂಟೈನ್‌ನಲ್ಲಿ ಇರಬೇಕಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.