ಬಾಗಲಕೋಟೆ:ಜಿಲ್ಲೆಯಲ್ಲಿ ಬುಧವಾರ ಮತ್ತೆ ಎರಡು ಕೋವಿಡ್-19 ಸೋಂಕು ದೃಢಪಟ್ಟಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಮುಧೋಳದ ಮದರಸಾದಲ್ಲಿ ತಪಾಸಣೆ ಕಾರ್ಯ ಕೈಗೊಂಡಿದ್ದ ಹಾಗೂ ಅಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ 37 ವರ್ಷದ ಹೆಡ್ ಕಾನ್ಸ್ಟೆಬಲ್ಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ಮೂಲತಃ ಜಮಖಂಡಿ ನಿವಾಸಿಯಾದ ಹೆಡ್ ಕಾನ್ಸ್ಟೆಬಲ್ ಮುಧೋಳದ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ನಿತ್ಯ ಜಮಖಂಡಿಯಿಂದ ಮುಧೋಳಕ್ಕೆ ಬಂದು ಹೋಗುತ್ತಿದ್ದರು.
ಮುಧೋಳದ ಮದರಸಾದಲ್ಲಿ ಇತ್ತೀಚೆಗೆ ಗುಜರಾತ್ ಹಾಗೂ ದೆಹಲಿಯಿಂದ ಬಂದಿದ್ದ 25 ಮಂದಿ ಧರ್ಮಪ್ರಚಾರಕರು ತಂಗಿದ್ದರು. ಸುದ್ದಿ ತಿಳಿದು ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರ ತಂಡ ಅಲ್ಲಿಗೆ ತೆರಳಿ ತಪಾಸಣೆ ಕಾರ್ಯ ನಡೆಸಿತ್ತು. ಈ ವೇಳೆ ಲಾಠಿ ಪ್ರಹಾರ ಕೂಡ ನಡೆದಿತ್ತು. ಆ ತಂಡದಲ್ಲಿ ಹೆಡ್ ಕಾನ್ಸ್ಟೆಬಲ್ಕೂಡ ಇದ್ದರು. ಮದರಸಾದಲ್ಲಿ ತಂಗಿದ್ದ ಗುಜರಾತ್ ಮೂಲದ ಧರ್ಮ ಪ್ರಚಾರಕರೊಬ್ಬರಿಗೆ ಕಳೆದ ವಾರ ಕೋವಿಡ್-19 ಸೋಂಕು ದೃಢಪಟ್ಟಿತ್ತು.
ಬಾಗಲಕೋಟೆ ನಗರದಲ್ಲಿ ಸೋಂಕಿತ ಗುಜರಾತಿ ಕುಟುಂಬದ ಮೂವರು ಮಕ್ಕಳಿಗೆ ಟ್ಯೂಶನ್ ಹೇಳಿಕೊಡುತ್ತಿದ್ದ ಶಿಕ್ಷಕಿಯ 52 ವರ್ಷದ ಪತಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ವಿಶೇಷವೆಂದರೆ ಶಿಕ್ಷಕಿಗೆ ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ.
ನಾಲ್ಕು ದಿನಗಳ ಹಿಂದೆ ಮೂರು ಮಕ್ಕಳಿಗೂ ಕೋವಿಡ್-19 ಸೋಂಕು ದೃಢಪಟ್ಟಿತ್ತು.
ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಯ ಐಸೊಲೇಶನ್ ವಾರ್ಡ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.