ಹುನಗುಂದ: ತಾಲ್ಲೂಕಿನಾದ್ಯಂತ ಕಳೆದ 5-6 ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ಬೆಳೆಗಳು ಕೊಳೆಯುತ್ತಿದ್ದು, ರೈತರನ್ನೂ ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.
ತಾಲ್ಲೂಕಿನಲ್ಲಿ ಬೆಳೆಗಳಾದ ತೊಗರಿ ಬೆಳೆ 18,570 ಹೆಕ್ಟೇರ್, ಗೋವಿನ ಜೋಳ 3646 ಹೆಕ್ಟೇರ್, ಸೂರ್ಯಕಾಂತಿ 1056 ಹೆಕ್ಟೇರ್, ತೋಟಗಾರಿಕೆ ಬೆಳೆಗಳಾದ ಈರುಳ್ಳಿ 4250 ಹೆಕ್ಟೇರ್ ಮತ್ತು ಮೆಣಸಿನಕಾಯಿ 1572 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಸೂರ್ಯಕಾಂತಿ ಬಹುತೇಕ ಬೆಳೆ ಕಟಾವಿಗೆ ಬಂದಿದ್ದು, ತಾಲ್ಲೂಕಿನ ಕೆಲವು ಭಾಗಗಳಲ್ಲಿ ಕಟಾವು ಮಾಡಲಾಗಿದೆ. ಇನ್ನುಳಿದ ಭಾಗದಲ್ಲಿ ನಿರಂತರ ಮಳೆಯಿಂದ ಬೆಳೆ ಕಟಾವು ಮಾಡಲು ಸಾಧ್ಯವಾಗದೆ ಹೊಲದಲ್ಲಿ ಕೊಳೆಯುತ್ತಿದೆ.
ತಿಂಗಳ ಹಿಂದೆ ಸುರಿದ ಮಳೆಗೆ ತೊಗರಿ ಬೆಳೆ ಹಾಳಾಗಿತ್ತು. ಈಗ ಸುರಿದ ಮಳೆಗೆ ಮತ್ತಷ್ಟು ಹಾಳಾಗಿದೆ. ಬಹುತೇಕ ತೊಗರಿ ಹೂವು ಬಿಡುವ ಸಮಯವಾಗಿದೆ. ಆದರೆ ನಿರಂತರ ಮಳೆಯಿಂದ ತೊಗರಿ ಹೊಲಗಳು ಕೆಸರು ಗದ್ದೆಯಂತೆ ಬಾಸವಾಗುತ್ತಿವೆ. ಇನ್ನು ಸ್ವಲ್ಪ ದಿನ ಕಳೆದರೆ ಬೆಳೆಯಲ್ಲಿನ ಕೀಟಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಬೇಕು. ಆದರೆ ಹೆಚ್ಚಿನ ತೇವಾಂಶದಿಂದ ಹೊಲಗಳಲ್ಲಿ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ರೈತರ ಅಳಲಾಗಿದೆ.
ಪ್ರಮುಖ ತೋಟಗಾರಿಕೆ ಬೆಳೆಯಾದ ಈರುಳ್ಳಿ ಸಹ ನಿರಂತರ ಮಳೆಗೆ ನೆಲೆ ಕಚ್ಚಿದೆ. ಕಿತ್ತು ಹಾಕಿದ ಈರುಳ್ಳಿ ಬಿಸಲು ಕಾಣದೆ ಒಣಗುತ್ತಿಲ್ಲ. ಕಟಾವಿಗೆ ಬಂದ ಈರುಳ್ಳಿ ಭೂಮಿಯಲ್ಲಿ ಕೊಳೆಯುತ್ತಿದೆ. ನಿರಂತರ ಮಳೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮೆಣಸಿನಕಾಯಿ ಬೆಳೆಯೂ ಸಹ ನಿರೀಕ್ಷಿತ ಪ್ರಮಾಣದ ಬೆಳವಣಿಗೆ ಕಂಡಿಲ್ಲ. ಮಳೆಯಿಂದ ಭೂಮಿಯಲ್ಲಿನ ತೇವಾಂಶ ಹೆಚ್ಚಾಗಿ ಹಳದಿ ರೋಗಕ್ಕೆ ತುತ್ತಾಗಿದೆ.
ಮಳೆ ಬಿಡುವು ನೀಡದಿರುವುದರಿಂದ ಕೆಲವು ಬೆಳೆಗಳು ಕಟಾವು ಸಾಧ್ಯವಾಗುತ್ತಿಲ್ಲ. ಹೊಲಗಳನ್ನು ಕಸ ಕಡ್ಡಿಯಿಂದ ಸ್ವಚ್ಛಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾದರೆ ಹಿಂಗಾರು ಬಿತ್ತನೆ ಮಾಡುವುದಾದರೂ ಹೇಗೆ? ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.