
ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ದಾನಪ್ಪ ಹುಲಜತ್ತಿ ಶನಿವಾರ ಮತ್ತೆ ಎರಡನೆಯ ಬಾರಿಗೆ ಅಧಿಕಾರ ಸ್ವೀಕರಿಸಿದರು.
ದಾನಪ್ಪ ಹುಲಜತ್ತಿ ಸೆ.26ರಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ನಂತರ ಅವರ ಅಧಿಕಾರ ಅವಧಿಯನ್ನು ಮೊಟಕುಗೊಳಿಸಿ ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆ ಡಿ.23ರಂದು ಸುರೇಶ ಪಾಟೀಲರಿಗೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಎಂಬ ಆದೇಶವನ್ನು ನೀಡಿತು. ನಂತರ ಸುರೇಶ ಪಾಟೀಲರು ಡಿ.24ರಂದು ಅಧಿಕಾರ ಸ್ವೀಕರಿಸಿದ್ದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ವಿರುದ್ಧ ಘೋಷಣೆಗಳನ್ನು ಕೂಡಾ ಕೂಗಿದ್ದರು.
ಇಲಾಖೆ ನೀಡಿದ ಆದೇಶದ ವಿರುದ್ಧ ದಾನಪ್ಪ ಹುಲಜತ್ತಿ ಧಾರವಾಡ ಹೈಕೋರ್ಟ್ ಪೀಠದಲ್ಲಿ ದಾವೆಯನ್ನು ಮಾಡಿದರು.
ನಂತರ ಹೈಕೋರ್ಟ್ ಪೀಠ ಡಿ.26ರಂದು ಸುರೇಶ ಪಾಟೀಲರ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿ ದಾನಪ್ಪ ಹುಲಜತ್ತಿ ಮತ್ತೆ ಅಧ್ಯಕ್ಷರಾಗಿ ಮುಂದುವರೆಯುವಂತೆ ಆದೇಶಿತು. ಹೈಕೋರ್ಟ್ ಆದೇಶವನ್ನು ಇಲಾಖೆಗೆ ನೀಡಿದ ನಂತರ ಇಲಾಖೆ ಮತ್ತೆ ಜ.2ರಂದು ದಾನಪ್ಪ ಹುಲಜತ್ತಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂದು ಆದೇಶಿತು.
ಹೈಕೋರ್ಟ್ ಪೀಠದ ಮತ್ತು ಇಲಾಖೆಯ ಆದೇಶದ ಪ್ರಕಾರ ದಾನಪ್ಪ ಹುಲಜತ್ತಿ ಮತ್ತೆ ಶನಿವಾರ ಎರಡನೆಯ ಬಾರಿಗೆ ಅಧಿಕಾರ ಸ್ವೀಕರಿಸಿದರು.
ರಬಕವಿ ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿಯೇ ಪೈಪೋಟಿ ನಡೆಯುತ್ತಿದೆ.