ADVERTISEMENT

ಸಿಎಂ ಬದಲಾವಣೆ ಕಾಂಗ್ರೆಸ್‌ನ ಹಗಲುಗನಸು: ಗೋವಿಂದ ಕಾರಜೋಳ ಲೇವಡಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 11:06 IST
Last Updated 8 ಜೂನ್ 2021, 11:06 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ    

ಬಾಗಲಕೋಟೆ: ರಾಜ್ಯದಲ್ಲಿ ಇನ್ನೇನು ಮುಖ್ಯಮಂತ್ರಿ ಬದಲಾವಣೆ ಆಗಲಿದ್ದಾರೆ ಎಂದು ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ನಾಯಕರು, ರಾಜ್ಯದ 224 ಕ್ಷೇತ್ರಗಳಲ್ಲೂ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಅಭ್ಯರ್ಥಿಗಳನ್ನು ಕೆಲಸಕ್ಕೆ ಹಚ್ಚಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಲೇವಡಿ ಮಾಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಅಜೆಂಡಾ ಇಲ್ಲ. ಈ ವಿಚಾರ ಯಾರೂ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಸರ್ಕಾರದ ಮುಂದಿನ ಅವಧಿಗೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ ಎಂದರು.

ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಅಂತೆ–ಕಂತೆಗಳಿಗೆ ಫುಲ್‌ಸ್ಟಾಪ್ ಇಡಲು ಹೈಕಮಾಂಡ್ ಕೇಳಿದರೆ ರಾಜೀನಾಮೆ ಕೊಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಕಾರಜೋಳ ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ನವರಿಗೆ ಬಹಳ ಅವಸರವಾಗಿ ರಾಜ್ಯದಲ್ಲಿ ಚುನಾವಣೆ ಬರಬೇಕಿದೆ. ಆದರೆ ಅವಧಿ ಮುಗಿದ ಮೇಲೆಯೇ ಚುನಾವಣೆ ಬರಲಿದೆ. ಮಧ್ಯದಲ್ಲಿ ಬರುವುದಿಲ್ಲ. ಕಾಂಗ್ರೆಸ್‌ನ ಆಸೆಯೂ ಈಡೇರುವುದಿಲ್ಲ ಎಂದು ಕಟುಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.