ಇಳಕಲ್: ಸಮೀಪದ ತುಂಬ ಗ್ರಾಮದಲ್ಲಿ ನಿಂಗನಗೌಡ ಅಗಸಿಮುಂದಿನ ಎಂಬ ರೈತನಿಗೆ ಸೇರಿದ 2 ಎತ್ತು ಸಾವನ್ನಪ್ಪಿದ್ದು, ಎತ್ತುಗಳಿಗೆ ವಿಷಪ್ರಾಶನವಾಗಿರಬಹುದು ಎಂಬ ಶಂಕೆ ಗ್ರಾಮದಲ್ಲಿ ಮೂಡಿದೆ.
ಈ ಬಗ್ಗೆ ರೈತ ನಿಂಗನಗೌಡ ಅಗಸಿಮುಂದಿನ, ʼರಾತ್ರಿ ಎತ್ತುಗಳಿಗೆ ಮುಸುರಿ ನೀರನ್ನು ಕುಡಿಯಲು ಇಡಲಾಗಿತ್ತು. ಮುಸುರಿ ನೀರು ಕುಡಿದ ನಂತರ ಎತ್ತುಗಳು ಒದ್ದಾಡಲು ಆರಂಭಿಸಿದವು. ಕೂಡಲೇ ಪಶು ವೈದ್ಯರನ್ನು ಕರೆಸಿ, ಚಿಕಿತ್ಸೆ ಕೊಡಿಸಿದರೂ ಎತ್ತುಗಳು ಉಳಿಯಲಿಲ್ಲ. ಮುಸುರಿ ನೀರಲ್ಲೇ ಯಾರೋ ವಿಷ ಹಾಕಿದ್ದಾರೆʼ ಎಂದು ದುಃಖದಿಂದ ಹೇಳಿದರು.
ರೈತನ ರೋದನ ಅಲ್ಲಿ ಸೇರಿದ್ದ ಜನರ ಕಣ್ಣಲ್ಲೂ ನೀರು ತರಿಸಿತ್ತು. ಮರಣ ಹೊಂದಿದ ಎತ್ತುಗಳಿಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು, ಟ್ರ್ಯಾಕ್ಟರ್ ಮೂಲಕ ಮೆರವಣಿಗೆಯಲ್ಲಿ ಒಯ್ದು ಅಂತ್ಯ ಸಂಸ್ಕಾರ ನಡೆಸಿದರು. ಎತ್ತುಗಳು ಅಕಾಲಿಕವಾಗಿ ಸಾವಿಗೀಡಾಗಿರುವ ಬಗ್ಗೆ ತನಿಖೆ ನಡೆಸಬೇಕು ಹಾಗೂ ನಷ್ಟಕ್ಕಿಡಾದ ರೈತನಿಗೆ ಸರ್ಕಾರ ಪರಿಹಾರ ನೀಡಬೇಕು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.