ಕುಳಗೇರಿ ಕ್ರಾಸ್: ಖಾನಾಪುರ ಎಸ್.ಕೆ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಐದಾರು ತಿಂಗಳುಗಳಿಂದ ವಾರಪೂರ್ತಿ ವೈದ್ಯರಿಲ್ಲದ್ದರಿಂದ ರೋಗಿಗಳು ಪರದಾಡುವಂತಾಗಿದೆ.
ಆರೋಗ್ಯ ಕೇಂದ್ರಕ್ಕೆ ಅಂದಾಜು 22ಕ್ಕೂ ಹೆಚ್ಚು ಗ್ರಾಮಗಳ ರೋಗಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ವಾರದಲ್ಲಿ ಮೂರು ದಿನ ಮಾತ್ರ ವೈದ್ಯರಿರುತ್ತಾರೆ. ವೈದ್ಯರಿಲ್ಲದ ದಿನಗಳಲ್ಲಿ ರೋಗಿಗಳಿಗೆ ಔಷದ ವಿತರಕರೇ ಮಾತ್ರೆ ನೀಡಿ ಕಳುಹಿಸುತ್ತಾರೆ.
ಕೇಂದ್ರದ ವ್ಯಾಪ್ತಿಗೆ ಕುಳಗೇರಿ, ಚಿರ್ಲಕೊಪ್ಪ, ಖಾನಾಪುರ ಎಸ್.ಕೆ, ಸೋಮನಕೊಪ್ಪ, ಗೋವನಕೊಪ್ಪ, ಬೀರನೂರ, ತಳಕವಾಡ, ಆಲೂರು ಎಸ್.ಕೆ, ನರಸಾಪುರ, ಬಂಕನೇರಿ, ಬೆಳವಲಕೊಪ್ಪ, ಕಳಸ, ಕಿತ್ತಲಿ, ಸುಳ್ಳ, ಹೆಬ್ಬಳ್ಳಿ ಮುಮ್ಮರಡ್ಡಿಕೊಪ್ಪ ಗ್ರಾಮಗಳ ಗರ್ಭಿಣಿಯರು, ಬಾಣಂತಿಯರ ಚಿಕಿತ್ಸೆಗೆ ವೈದ್ಯರಿಲ್ಲದಂತಾಗಿದೆ. ಅನಿವಾರ್ಯವಾಗಿ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗುವಂತಾಗಿದೆ.
ಸುತ್ತಲಿನ ಗ್ರಾಮಗಳ ಜನರು ಇದೇ ಆರೋಗ್ಯ ಕೇಂದ್ರವನ್ನು ನೆಚ್ಚಿಕೊಂಡಿದ್ದಾರೆ. ಆದರೆ, ವೈದ್ಯರ ಅಲಭ್ಯತೆಯಿಂದಾಗಿ ಜನರು ಅನಾರೋಗ್ಯಕ್ಕೆ ಒಳಗಾದರೆ ಏನು ಮಾಡಬೇಕು ಎಂಬ ಚಿಂತೆ ಪಡುವಂತಾಗಿದೆ.
ಬೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇರುವ ವೈದ್ಯರನ್ನೇ ಇಲ್ಲಿಗೂ ನಿಯೋಜನೆ ಮಾಡಲಾಗಿದೆ. ಆದ್ದರಿಂದ ಮೂರು, ಮೂರು ದಿನ ಅವರು, ಅಲ್ಲಿ, ಇಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಗ್ರಾಮೀಣ ಸೇವೆಗೆ ನಿಯೋಜಿಸಿರುವ ವೈದ್ಯರೂ ಇಲ್ಲಿದ್ದಾರೆ. ಆದರೆ, ಅವರು ಸರಿಯಾಗಿ ಬರುವುದಿಲ್ಲ ಎನ್ನುವುದು ಜನರ ದೂರು.
‘ವಾರ ಪೂರ್ತಿ ವೈದ್ಯರು ಇಲ್ಲದಿರುವುದರಿಂದ ಜನರಿಗೆ ತೀವ್ರ ತೊಂದರೆಯಾಗಿದೆ. ವೈದ್ಯರಿಲ್ಲದ ದಿನ ಜನರು ಎಲ್ಲಿಗೆ ಹೋಗಬೇಕು. ಕೂಡಲೇ ಎಲ್ಲ ದಿನ ಇರುವಂತಹ ವೈದ್ಯರ ನೇಮಕ ಮಾಡಬೇಕು’ ಎಂದು ಕುಳಗೇರಿ ಗ್ರಾಮ ಪಂಚಾಯಿತಿ ಸದಸ್ಯ ರಾಮನಗೌಡ ದ್ಯಾವನಗೌಡ್ರ ಆಗ್ರಹಿಸಿದರು.
‘ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಬ್ಬರು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಸೇವೆ ಮಾಡುವ ವೈದ್ಯರು ವಾರದ ಏಳೂ ದಿನ ಕಾರ್ಯ ನಿರ್ವಹಿಸಬೇಕು. ಇನ್ನೊಬ್ಬರು ಮೂರು ದಿನ ಕುಳಗೇರಿ, ಇನ್ನೂ ಮೂರು ದಿನ ಬೇಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.